ಬೆಂಗಳೂರು: ಎರಡನೇ ಬಾರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಜೂನ್ 14 ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಕೆಪಿಜೆಪಿ ಪಕ್ಷದ ಶಾಸಕ ಆರ್.ಶಂಕರ್ ಅಲ್ಪ ಸಮಯದಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಇದರ ಬೆನ್ನಲ್ಲೇ ಆರ್.ಶಂಕರ್ ಅನರ್ಹತೆಯ ಅಸ್ತ್ರ ಪ್ರಯೋಗ ಆಗಲಿದೆಯಾ ಎಂಬ ಅನುಮಾನ ಮೂಡಿತ್ತು.
ಸಚಿವ ಸ್ಥಾನ ಪಡೆಯುವ ವೇಳೆ ಶಂಕರ್ ತಮ್ಮ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನ ಮಾಡಲು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದರು. ಆದರೆ ಸ್ಪೀಕರ್ ಈ ಪತ್ರವನ್ನು ನಿರಾಕರಿಸಿ ಪಕ್ಷದಿಂದ ಪತ್ರವನ್ನು ನೀಡುವಂತೆ ತಿಳಿಸಿದ್ದರು.
ಇತ್ತ 2ನೇ ಬಾರಿಗೆ ಮೈತ್ರಿ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದು ಮುಂಬೈಗೆ ತೆರಳಿದ್ದ ಆರ್. ಶಂಕರ್ ಜುಲೈ 12 ರಂದು ಸ್ಪೀಕರ್ ಗೆ ಬರೆದು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು. ಅಲ್ಲದೇ ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಸ್ಪೀಕರ್ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಶಂಕರ್ ಅವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗೆ ಸ್ಪೀಕರ್ ಸೂಚಿಸಿದ್ದಾರೆ.
ಇತ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ ಅವರನ್ನು ಅನರ್ಹತೆ ಮಾಡುವಂತೆ ಕಾಂಗ್ರೆಸ್ ಸ್ಪೀಕರ್ ಅವರಿಗೆ ಮನವಿ ಮಾಡಿದೆ. ಹಳೆ ಪ್ರಕರಣದಲ್ಲಿ ವಿಚಾರಣೆ ನಡೆಸಲಿರುವ ಸ್ಪೀಕರ್ ಅವರು ಈ ವಿಚಾರದ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಹಳ್ಳಿ ಅವರ ವಿರುದ್ಧ ಕಾಂಗ್ರೆಸ್ ಕೆಲ ಸಾಕ್ಷಿಗಳನ್ನು ನೀಡಿದೆ. ಈ ಅಂಶಗಳೊಂದಿಗೆ ಸ್ಪೀಕರ್ ಅವರು ವಿಚಾರಣೆ ನಡೆಲಿದ್ದಾರೆ.