ಮುಂಬೈ: ನಟ ಆರ್ ಮಾಧವನ್ ಪುತ್ರ ವೇದಾಂತ್ ಪ್ರಸ್ತುತ ದುಬೈನಲ್ಲಿ 2026ರ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ತಯಾರಿಯನ್ನು ನಡೆಸುತ್ತಿದ್ದು, ಮಗನಿಗೆ ತರಬೇತಿಯಲ್ಲಿ ಸಹಾಯ ಮಾಡಲು ಮಾಧವನ್ ಪತ್ನಿಯೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ವೇದಾಂತ್ ಈಗಾಗಲೇ ರಾಷ್ಟ್ರೀಯ ಈಜು ಚಾಂಪಿಯನ್ ಆಗಿದ್ದು, ಮಾಧವನ್ ಹಾಗೂ ಅವರ ಪತ್ನಿ ವಿಶ್ವ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ವೇದಾಂತ್ ಪಾಲ್ಗೊಳ್ಳಲು ಒಳ್ಳೆಯ ತರಬೇತಿ ಕೊಡಿಸುವ ಬಗ್ಗೆ ಯೋಜಿಸಿದ್ದರು. ದುಬೈನಲ್ಲಿ ಮಗನ ತರಬೇತಿಗೆ ಒಳ್ಳೆಯ ಸೌಲಭ್ಯ ಇರುವುದನ್ನು ಖಚಿತಪಡಿಸಿಕೊಂಡಿದ್ದು, ಅವನಿಗೆ ಸಾಥ್ ನೀಡಲು ದಂಪತಿ ದುಬೈ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್ ಈಗ ಉತ್ತರಾಖಂಡ್ ಬ್ರಾಂಡ್ ಅಂಬಾಸಿಡರ್
ಕೋವಿಡ್-19 ಪರಿಣಾಮವಾಗಿ ಮುಂಬೈನ ದೊಡ್ಡ ಈಜುಕೊಳಗಳನ್ನು ಮುಚ್ಚಲಾಗಿದೆ. ಹೀಗಾಗಿ ವೇದಾಂತ್ಗೆ ದುಬೈನಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ನಾನು ಹಾಗೂ ಸರಿತಾ ಅವನಿಗೆ ತರಬೇತಿಯಲ್ಲಿ ಸಹಾಯ ಮಾಡಲು ದುಬೈ ಪ್ರಯಾಣ ಬೆಳೆಸಿದ್ದೇವೆ ಎಂದು ಮಾಧವನ್ ಹೇಳಿದ್ದಾರೆ.
ಇದರೊಂದಿಗೆ ಜನಪ್ರಿಯ ನಟ ಮಾಧವನ್ ತನ್ನ ಮಗ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡುವುದಿಲ್ಲ ಎಂಬ ಖಚಿತ ಉತ್ತರ ನೀಡಿದ್ದಾರೆ. ಮಕ್ಕಳು ಏನನ್ನು ಮಾಡಲು ಬಯಸುತ್ತಾರೋ ಪೋಷಕರೂ ಅದನ್ನೇ ಮಾಡಲು ಅವರಿಗೆ ಪ್ರೋತ್ಸಾಹ ನೀಡಬೇಕು. ವೇದಾಂತ್ ಪ್ರಪಂಚದಾದ್ಯಂತ ಚಾಂಪಿಯನ್ಶಿಪ್ಗಳನ್ನು ಗೆಲ್ಲುತ್ತಿರುವುದು ನಮಗೆ ಬಹಳ ಹೆಮ್ಮೆಯ ವಿಷಯ ಎಂದರು. ಇದನ್ನೂ ಓದಿ: ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ
ಇದೇ ಸಂದರ್ಭದಲ್ಲಿ ಮಾಧವನ್ ಎಲ್ಲಾ ಸ್ಟಾರ್ ಪೋಷಕರಿಗೂ ಸಲಹೆಯನ್ನು ನೀಡಿದ್ದಾರೆ. ಮಕ್ಕಳನ್ನು ಸ್ವತಂತ್ರವಾಗಿ ಹಾರಾಡಲು ಬಿಡಬೇಕು. ವೇದಾಂತ್ ನಟನೆಯನ್ನು ಆಯ್ಕೆ ಮಾಡದೇ ಇರುವುದರ ಬಗ್ಗೆ ನನಗೆ ಯಾವುದೇ ಬೇಜಾರಿಲ್ಲ. ನನ್ನ ಸ್ವಂತ ವೃತ್ತಿಗಿಂತ ಅವನ ಆಯ್ಕೆಯ ವೃತ್ತಿ ಮುಖ್ಯ ಎಂದು ಹೇಳಿದರು.