ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಠ ಜಾತಿ ಘಟಕದ ಅಧ್ಯಕ್ಷರಾಗಿ ವಿಧಾನಪರಿಷತ್ ಮಾಜಿ ಸದಸ್ಯ ಆರ್.ಧರ್ಮಸೇನಾ ಅವರನ್ನು ನೇಮಕ ಮಾಡಲಾಗಿದೆ.
ಧರ್ಮಸೇನ ಅವರನ್ನು ನೇಮಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ. ಪರಿಶಿಷ್ಟ ಸಮುದಾಯದ ಎಡಗೈ ಪಂಗಡದ ನಾಯಕರಾದ ಧರ್ಮಸೇನ ಎರಡು ಬಾರಿ ವಿಧಾನಪರಿಷತ್ ಗೆ ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು.
ಇತ್ತೀಚೆಗೆ ವಿಧಾನಪರಿಷತ್ ಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅವರು ಸ್ಪರ್ದಿಸಿರಲಿಲ್ಲ. ಚುನಾವಣೆಗೆ ಸ್ಪರ್ದಿಸಲು ಅವರು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಡಾ.ತಿಮ್ಮಯ್ಯ ಅವರನ್ನು ಕಣಕ್ಕಿಳಿಸಿತ್ತು. ಮೈಸೂರು ಭಾಗದ ಹಿರಿಯ ದಲಿತ ಮುಖಂಡರಾಗಿದ್ದ, ಮುತ್ಸದ್ದಿ ರಾಜಕಾರಣಿ ಮಾಜಿ ಸಚಿವ ದಿವಂಗತ ರಾಚಯ್ಯನವರ ಸುಪುತ್ರರಾಗಿರುವ ಧರ್ಮಸೇನ ಪಕ್ಷದಲ್ಲಿ ಸಂಭಾವಿತರೆಂದೇ ಹೆಸರುಗಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಧರ್ಮಸೇನ ಅವರಿಗೆ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ನೂತನ ಜವಾಬ್ದಾರಿ ನೀಡಲಾಗಿದೆ. ಇದನ್ನೂ ಓದಿ: ದೇವಾಲಯ ಒಡೆದು ಮಸೀದಿ ನಿರ್ಮಾಣ ಮಾಡಿದ್ದಕ್ಕೆ ಸಾಕ್ಷ್ಯ ಮಂಗಳೂರಿನಲ್ಲಿ ಸಿಕ್ಕಿದೆ: ಸಿ.ಟಿ ರವಿ