ತುಮಕೂರು: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಸಮಸ್ಯೆ ಉಂಟಾಗಿತ್ತು. ಇಂದು ಹಲವು ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಅಧಿಕಾರಿಗಳೊಂದಿಗೆ ಕಂದಾಯ ಸಚಿವ ಆರ್. ಅಶೋಕ್ ಚರ್ಚಿಸಿದ್ದಾರೆ.
ತುಮಕೂರಿನ ಬ್ಯಾಲದಕೆರೆ ಮತ್ತು ಜಲಧಿಗೆರೆಯಲ್ಲಿ ಮಳೆಹಾನಿಯನ್ನು ಪರಿಶೀಲನೆ ಮಾಡಿ ಮಾತನಾಡಿದ ಅವರು, ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಯಿಂದ ಸಮಸ್ಯೆ ಆಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. 10 ದಿನದೊಳಗೆ ಬೆಳೆ ಹಾನಿ ಬಗ್ಗೆ ವರದಿ ಕೊಡಬೇಕು. ತಕ್ಷಣ ಸರ್ಕಾರದಿಂದ ಹಣ ಬಿಡುಗಡೆ ಮಾಡುತ್ತೇನೆ. ಕಳೆದ ಒಂದು ವಾರದಲ್ಲಿ 300 ಕೋಟಿಗೂ ಅಧಿಕ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮುರುಡೇಶ್ವರಕ್ಕೆ ಐಸಿಸ್ ಕಣ್ಣು- ದೇವಾಲಯಕ್ಕೆ ವಿಶೇಷ ಪೊಲೀಸ್ ಭದ್ರತೆ ವ್ಯವಸ್ಥೆ
ಸುಮಾರು 679 ಕೋಟಿ ರೂಪಾಯಿ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈಗಾಗಲೇ ಇದೆ. ಮನೆ ಹಾನಿ ಆದವರಿಗೆ ತಕ್ಷಣ ಹಣ ಕೊಡಬೇಕು. 220000 ರೈತರಿಗೆ ಪರಿಹಾರ ನೀಡಿದ್ದೇವೆ. ಕೇಂದ್ರ ಸರ್ಕಾರಕ್ಕೂ ಹೆಚ್ಚಿನ ಹಣ ನೀಡುವಂತೆ ಪತ್ರ ಬರೆಯುತ್ತೇವೆ. ಎನ್.ಡಿ.ಆರ್.ಎಫ್ ನಿಂದ ಹೆಚ್ಚಿನ ಸುಮಾರು 900 ಕೋಟಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇವೆ. ಕಳೆದ ಅಗಷ್ಟನಲ್ಲಿ ಕೂಡ 760 ಕೋಟಿ ರೂಪಾಯಿ ಹಣ ಬಂದಿತ್ತು. ರಾಗಿ, ಜೋಳ ಹೀಗೆ ಎಲ್ಲ ರೀತಿಯ ಬೆಳೆಗಳಿಗೂ ಪರಿಹಾರ ನೀಡುತ್ತೇವೆ. ರೈತರ ಜೊತೆ ನಮ್ಮ ಸರ್ಕಾರ ಸದಾ ಇರುತ್ತದೆ ಎಂದು ಹೇಳಿದರು.