ಹಾಸನ: ಡಿಕೆಶಿ ಜೊತೆ ಯಾರ್ಯಾರು ಕೈ ಎತ್ತಿದ್ದಾರೆ ಅವರೆಲ್ಲ ಬೀದಿಗೆ ಬಂದಿದ್ದು, ಸಿದ್ದರಾಮಯ್ಯ ಅವರು ಸಹ ಬೀದಿಗೆ ಬರುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ, ಶ್ರವಣಬೆಳಗೊಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ-ಡಿಕಿಶಿ ಆಲಿಂಗನ ಧೃತರಾಷ್ಟ್ರನ ಆಲಿಂಗನವಿದ್ದಂತೆ, ಮಹಾಭಾರತ ಆದಮೇಲೆ ಧೃತರಾಷ್ಟ್ರ ಭೀಮನನ್ನು ಆಲಿಂಗನ ಮಾಡಿಕೊಂಡಂತಿದೆ. ಹಿಂದೆ ಅಸೆಂಬ್ಲಿಯಲ್ಲಿ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಎರಡು ಕೈಎತ್ತಿ ನಾವು ಜೋಡೆತ್ತುಗಳು ಎಂದು ಹೇಳಿದ್ರು. ಕೊನೆಗೆ ಏನಾಯ್ತು, ಕುಮಾರಸ್ವಾಮಿ ಅವರು ಅಬ್ಬೇಪಾರಿ ಆಗಿ, ಬೀದಿಗೆ ಬಂದುಬಿಟ್ರು. ಈಗ ಇವರು ಕೈ ಎತ್ತಿದ್ದಾರೆ, ಸಿದ್ದರಾಮಯ್ಯ ಕೂಡ ಬೀದಿಗೆ ಬರ್ತಾರೆ. ಡಿಕೆಶಿ-ಸಿದ್ದರಾಮಯ್ಯ ಅವರದ್ದು ಬಲವಂತದ ಅಪ್ಪುಗೆ, ಯಾರೋ ಹೇಳಿದ್ದಾರೆ ಅಂತ ಅಪ್ಪಿಕೊಂಡಿದ್ದಾರೆ ಹೊರತು, ಪ್ರೀತಿಯಿಂದ ಅಪ್ಪಿಕೊಂಡಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: 75ನೇ ಸ್ವಾತಂತ್ರ್ಯ ಸಂಭ್ರಮ – ಬಾವುಟವನ್ನು ಮಡಿಸೋದು ಹೇಗೆ?
ಈ ಅಪ್ಪುಗೆ ಬಹಳ ದಿನ ಉಳಿಯಲ್ಲ, ಈಗಾಗಲೇ ಕಾಂಗ್ರೆಸ್ನ ನಾಯಕತ್ವದ ಜಗಳ ಬೀದಿಗೆ ಬಂದಿದೆ. ಒಬ್ಬರಲ್ಲ, ಇಬ್ಬರಲ್ಲ ಐದಾರು ಜನ ಕಿತ್ತಾಡುತ್ತಿದ್ದಾರೆ. ಇದರ ಲಾಭವನ್ನು ಹಂಡ್ರೆಡ್ ಪರ್ಸೆಂಟ್ ಪಡೆಯಲು ನಾವು ನಿಂತಿದ್ದೇವೆ, ನಾವು ಈ ಆಲಿಂಗನಕ್ಕೋಸ್ಕರ ಬಹಳ ದಿನದಿಂದ ಕಾದಿದ್ದೇವು, ಈಗ ಆಲಿಂಗನವಾಗಿದೆ ಮುಂದೆ ನೋಡ್ತಿರಿ, ನಾವು ರಾಜಕಾರಣಿಗಳು, ಸನ್ಯಾಸಿಗಳಲ್ಲ. ಕಾಂಗ್ರೆಸ್ನಲ್ಲಿ ಏನು ನಡೆಯುತ್ತಿದೆ ಅದು ನ್ಯಾಚುರಲ್ ಆಗಿ ಬಿಜೆಪಿ ಬೆನಿಫಿಟ್ ಆಗೇ ಆಗುತ್ತದೆ. ಮೋದಿ, ಅಮಿತ್ ಶಾ, ಕರ್ನಾಟಕದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರು ಇರೋವರೆಗೂ ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದು ಶತಸಿದ್ಧ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಖರ್ಗೆ ಸಮ್ಮುಖದಲ್ಲಿ ನ್ಯಾಷನಲ್ ಹೆರಾಲ್ಡ್ ಕಚೇರಿ ಶೋಧ: ಅಧಿವೇಶನದ ಮಧ್ಯೆ ಸಮನ್ಸ್ ಜಾರಿಗೆ ಕಾಂಗ್ರೆಸ್ ಕಿಡಿ
ಅಮಿತ್ ಶಾ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಪ್ರವಾಹದ ಬಗ್ಗೆ ಅಷ್ಟೇ ಚರ್ಚಿಸಿದ್ದು, ಬೇರೆ ಯಾವ ವಿಚಾರವನ್ನು ಚರ್ಚೆ ಮಾಡಿಲ್ಲ, ಕರ್ನಾಟಕದ ಅಭಿವೃದ್ಧಿ ಬಗ್ಗೆಯೂ ಮಾತನಾಡಿದ್ದಾರೆ. ರಾಜ್ಯದಲ್ಲಿ ಮಳೆ ಬಂದು ಹಾನಿಯಾಗಿದೆ, ಅರವತ್ತಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇದರ ಬಗ್ಗೆ ನಮಗೆ ಚಿಂತೆಯಿದೆ, ಆದರೆ ಕಾಂಗ್ರೆಸ್ನವರಿಗೆ ಹುಟ್ಟುಹಬ್ಬ ಆಚರಿಸುವುದು. ಸಮಾರಂಭಗಳನ್ನು ಮಾಡುವ ಚಿಂತೆ ಎಂದು ಕುಟುಕಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಮುಖ್ಯಮಂತ್ರಿಗಳು ಆರಾಮಾಗಿ ಈ ಅವಧಿಯನ್ನು ಮುಗಿಸುತ್ತಾರೆ. ಮುಂದಿನ ಅವಧಿಯಲ್ಲಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗ್ತಿವಿ. ಅದೇ ರೀತಿ ಯಾವುದೇ ಕಾರಣಕ್ಕೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಚೇಂಜ್ ಆಗಲ್ಲ. ಇಬ್ಬರೂ ಕೂಡ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.