ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕುವ ಬದಲು ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಕೋಟಿ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಿರುವ ಸರ್ಕಾರ, ಅಭಿವೃದ್ಧಿ ಕಾಮಗಾರಿಗೆ ಒಂದು ಅಡಿಗಲ್ಲನ್ನೂ ಹಾಕಿಲ್ಲ. ಜನರು ಸರ್ಕಾರದ ಬಗ್ಗೆ ಛೀ, ಥೂ ಎಂದು ಮಾತನಾಡುತ್ತಿದ್ದಾರೆ. ಸರ್ಕಾರ ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯನವರು ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ವೀರ ಎಂದು ಟೀಕಿಸಿದ್ದಾರೆ.ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಮಾಡಲು ಸಾಕಷ್ಟು ಕೆಲಗಳಿವೆ: ಕುಸ್ತಿ ಫೆಡರೇಷನ್ನಿಂದ ಬ್ರಿಜ್ ಭೂಷಣ್ ‘ಸನ್ಯಾಸತ್ವ’
ಬರ ಪರಿಹಾರಕ್ಕೆ ಇದೇ ವಾರದಲ್ಲಿ 2 ಸಾವಿರ ರೂ. ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ ಈವರೆಗೆ ಹಣ ಸಿಕ್ಕಿಲ್ಲ. ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. 15-20 ಸಾವಿರ ರೂ.ಗೆ ಯಾರೂ ಬರದೆ ಶಾಲಾ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯ ಮಾಡಲಾಗಿದೆ. ಈ ವಿಚಾರಗಳಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ (Congress) ನಾಯಕ ಬಿ.ಕೆ.ಹರಿಪ್ರಸಾದ್ (B.K Hariprasad) ಹತಾಶರಾಗಿದ್ದು, ಅವರ ಹೇಳಿಕೆ ಕಾಂಗ್ರೆಸ್ನ ಮನಸ್ಥಿತಿಯನ್ನು ಎತ್ತಿ ತೋರುತ್ತದೆ. ಸಮೀಕ್ಷೆಗಳ ಪ್ರಕಾರ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲಿದ್ದಾರೆ. ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಸೆಮಿಫೈನಲ್ ಗೆದ್ದಿದೆ. ಇದರಿಂದ ಕಾಂಗ್ರೆಸ್ ಫೈನಲ್ಗೆ ಬರುವ ಅವಕಾಶ ಕಳೆದುಕೊಂಡಿದೆ. ಅಲ್ಲದೇ ರಾಹುಲ್ ಗಾಂಧಿಯ ಬದಲು ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಮಾಡಿ ಎಂದು ಒಕ್ಕೂಟದ ಸದಸ್ಯರು ಹೇಳುತ್ತಿದ್ದಾರೆ. ಇವೆಲ್ಲ ಬೆಳವಣಿಗೆಯಿಂದ ಕಾಂಗ್ರೆಸ್ಸಿಗರು ಹತಾಶರಾಗಿದ್ದು, ಬೇರೆ ವಿಷಯಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಕಾಂಗ್ರೆಸ್ನ್ನು ಸ್ಥಾಪನೆ ಮಾಡಿದ್ದೇ ಬ್ರಿಟಿಷರು. ಅಂದ ಮೇಲೆ ಕಾಂಗ್ರೆಸ್ಸಿಗರು ಅವರ ಬೂಟು ನೆಕ್ಕಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಬ್ರಿಟಿಷರಿಂದ ಪಳಗಿದ ಕಾಂಗ್ರೆಸ್ಸಿಗರು ಅವರ ಕೈ ಕೆಳಗೆ ಕೆಲಸ ಮಾಡಿದ್ದರು. ಬಿಜೆಪಿಗೆ (BJP) ಬ್ರಿಟಿಷರು ಎಂದೂ ಅಧ್ಯಕ್ಷರಾಗಿ ಆಯ್ಕೆಯಾಗಿರಲಿಲ್ಲ. ಯುದ್ಧ ಬಿಟ್ಟು ಓಡಿ ಬಂದು ಮಕ್ಕಳನ್ನು ಅಡಮಾನ ಇಟ್ಟ ಪಾಪಿ ಟಿಪ್ಪು ಸುಲ್ತಾನನನ್ನು ಕಾಂಗ್ರೆಸ್ನವರು ಬೆಂಬಲಿಸುತ್ತಾರೆ. ಭಗತ್ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ಸುಭಾಷ್ ಚಂದ್ರ ಬೋಸ್ ರಕ್ತ ಹರಿಸಿ ಹೋರಾಟ ಮಾಡಿದ್ದರು. ಕನ್ನಡವನ್ನು ಕೊಂದವನು, ಹಿಂದೂಗಳನ್ನು ಕೊಲ್ಲಲು ಕತ್ತಿ ಹಿಡಿದವನಾದ ಟಿಪ್ಪುವನ್ನು ಕಾಂಗ್ರೆಸ್ನವರು ಬೆಂಬಲಿಸುತ್ತಾರೆ. ಟಿಪ್ಪು ಯುದ್ಧ ಮಾಡಿ ಗೆಲ್ಲದೆ, ಮೈಸೂರು ಅರಸರನ್ನು ಜೈಲಿಗೆ ಕಳುಹಿಸಿ ಹೇಡಿತನದಿಂದ ಗೆದ್ದವನು. ಇಂತಹ ಮತಾಂಧನನ್ನು ಹೀರೋ ಮಾಡಲು ಹೋಗಬಾರದು ಎಂದು ಅವರು ಕಾಂಗ್ರೆಸ್ಗೆ ತಿವಿದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ. ಅದಕ್ಕಾಗಿ ಸಮರ್ಥರಾದವರನ್ನು ಆಯ್ಕೆ ಮಾಡಲಾಗುತ್ತದೆ. ಜೆಡಿಎಸ್ ಕೂಡ ಈಗ ಪಕ್ಷದ ಜೊತೆಗಿದ್ದು, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಪಕ್ಷ ದುರ್ಬಲವಾಗಿರುವ ಕಡೆಗಳಲ್ಲಿ ಪಕ್ಷಕ್ಕೆ ಬಲ ಬರಲಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಅಲ್ಲಾ ಹು ಅಕ್ಬರ್ ಎನ್ನಬೇಕಾಗಿರುವುದು ಮನೆ, ಮಸೀದಿಯಲ್ಲಿ.. ಸಮಾಜದಲ್ಲಲ್ಲ: ಕಲ್ಲಡ್ಕ ಪ್ರಭಾಕರ್ ಭಟ್