ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ವಿರುದ್ಧ ಪೊಲೀಸರು ನಡೆದುಕೊಂಡ ವರ್ತನೆ ಪ್ರಕರಣವನ್ನ ಸಿಬಿಐ (CBI) ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸರ್ಕಾರಕ್ಕೆ ಆಗ್ರಹಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಟಿ ರವಿ ಕೇಸ್ನಲ್ಲಿ ಆಂಧ್ರ ಸಿನಿಮಾ ರಕ್ತ ಚರಿತ್ರೆ ಮಾಡೆಲ್ನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿದೆ. ವಿರೋಧ ಪಕ್ಷವನ್ನ ಟಾರ್ಗೆಟ್ ಮಾಡೋ ಕೆಲಸ ಶುರುವಾಗಿದೆ. ಆಂಧ್ರ ರಾಜಕೀಯ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಆಗೋ ಸ್ಥಿತಿ ನಿರ್ಮಾಣ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಔಟ್ ಗೋಯಿಂಗ್ ಸಿಎಂ ಅವರು ನಮಗೇನು ಆಗಬೇಕು ಅಂತ ಸುಮ್ಮನೆ ಇದ್ದಾರೆ. ಡಿ.ಕೆ.ಶಿವಕುಮಾರ್ ವಿಪಕ್ಷಗಳನ್ನ ಬಡಿದು ಸಿಎಂ ಆಗೋಣ, ಹೈಕಮಾಂಡ್ ಮುಂದೆ ಶಕ್ತಿ ತೋರಿಸೋಕೆ ಹೀಗೆಲ್ಲ ಮಾಡ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಪೊಲೀಸರು ನಡೆದುಕೊಂಡಿರೋ ವರ್ತನೆ ಸಹಿಸಲು ಸಾಧ್ಯವಿಲ್ಲ. ಯಾರದ್ದೋ ಸೂಚನೆ ಮೇಲೆ ಪೊಲೀಸರು ಹೀಗೆ ನಡೆಸಿಕೊಂಡಿದ್ದಾರೆ. ಅವರು ಯಾರು ಅನ್ನೋದನ್ನ ಪತ್ತೆ ಹಚ್ಚಬೇಕು. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ ಕೇಸನ್ನ ಸಿಬಿಐಗೆ ಕೊಡಬೇಕು ಎಂದು ಅಶೋಕ್ ಆಗ್ರಹಿಸಿದರು. ಇದನ್ನೂ ಓದಿ: ನನ್ನ ವಿರುದ್ಧ ಸಂಚು: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿಟಿ ರವಿ