ಮೈಸೂರು: ಬ್ಯಾಡ್ಮಿಂಟನ್ ಅಂತರಾಷ್ಟ್ರೀಯ ಆಟಗಾರ್ತಿ ಪಿ.ವಿ ಸಿಂಧು ಅವರು ಚಾಮುಂಡಿ ಕ್ರೀಡಾಂಗಣದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ ಮಾಡಿದ್ದಾರೆ.
ಪಿ.ವಿ ಸಿಂಧು ಅವರು ಕ್ರೀಡಾಕೂಟ ಉದ್ಘಾಟಿಸಿದ್ದು, ಅವರಿಗೆ ಸಿಎಂ ಯಡಿಯೂರಪ್ಪ, ಸಚಿವರಾದ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅವರು ಕನ್ನಡದಲ್ಲಿಯೇ ಮಾತು ಶುರು ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಂಧು ಅವರು, “ಎಲ್ಲರಿಗೂ ನಮಸ್ಕಾರ. ನನಗೆ ದಸರಾಗೆ ಬಂದಿದ್ದು ತುಂಬಾ ಖುಷಿಯಾಗಿದೆ. ನಾನು ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದೇನೆ. ಮೈಸೂರು ಕ್ಲೀನ್ ಸಿಟಿ ಎಂಬುದನ್ನು ಕೇಳಿದ್ದೇನೆ. ಆದರೆ ಈಗ ಇಲ್ಲಿ ಬಂದಿರುವುದು ಖುಷಿಯಾಗಿದೆ. ಈ ಸ್ಥಳದಲ್ಲಿ ದುರ್ಗಾಮಾತೆ ನೆಲೆಸಿದ್ದಾರೆ. ಅಲ್ಲದೆ ಎಲ್ಲರೂ ನನ್ನನ್ನು ಗುರುತಿಸುತ್ತಿರುವುದು ಸಹ ಖುಷಿಯಾಗಿದೆ. ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಏಕೆಂದರೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸುವುದು ನನ್ನ ಮುಂದಿನ ಗುರಿ” ಎಂದು ಹೇಳಿದರು.
ಇದೇ ವೇಳೆ ಖೇಲೋ ಇಂಡಿಯಾದ ಬಗ್ಗೆ ಮಾತನಾಡಿದ ಅವರು, ಖೇಲೋ ಇಂಡಿಯಾದ ಮೂಲಕ ಸಾಕಷ್ಟು ಗ್ರಾಮೀಣ ಪ್ರತಿಭೆಗಳು ಹೊರಬರಲಿದೆ. ಅಂತಹ ಪ್ರತಿಭೆಗಳಿಗೆ ತಳಮಟ್ಟದಲ್ಲಿ ಉತ್ತಮವಾದ ಟ್ರೈನಿಂಗ್ ಕೊಡಬೇಕಿದೆ. ಇದೇ ಕಾರಣಕ್ಕೆ ಖೇಲೋ ಇಂಡಿಯಾ ಕಾನ್ಸೆಪ್ಟ್ ಬಂದಿದೆ. ಶಾಲಾ ಮಟ್ಟದಲ್ಲಿಯೇ ಪ್ರತಿಭೆ ಕಂಡು ಹಿಡಿದು ಉತ್ತಮ ತರಬೇತಿ ಕೊಡಬೇಕು. ಇದಕ್ಕೆ ಪೋಷಕರು ಸಹ ಪ್ರೋತ್ಸಾಹಿಸಬೇಕು. ಅವರೇ ಮಕ್ಕಳಿಗೆ ಹೆಚ್ಚಾಗಿ ಹುರಿದುಂಬಿಸಬೇಕು. ಆಗಲೇ ಗ್ರಾಮೀಣ ಪ್ರತಿಭೆಗಳು ಯಶಸ್ಸುಗಳಿಸಲು ಸಾಧ್ಯ ಎಂದರು.