ವಯನಾಡಿನ ದುರಂತಕ್ಕೆ ಮಿಡಿದ ಅಲ್ಲು ಅರ್ಜುನ್- ಸಂತ್ರಸ್ತರಿಗೆ 25 ಲಕ್ಷ ದೇಣಿಗೆ ನೀಡಿದ ನಟ

Public TV
1 Min Read
allu arjun

ಕೇರಳದ ವಯನಾಡಿನಲ್ಲಿ (Wayanad Landslides) ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಈಗ 300 ದಾಟಿದೆ. ಈ ದುರಂತದಲ್ಲಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಸಂತ್ರಸ್ತರ ಸಹಾಯಕ್ಕೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮುಂದಾಗಿದ್ದಾರೆ.

ALLU ARJUN 3

ವಯನಾಡು ಭೂಕುಸಿತ ದುರಂತದ ನಿಮಿತ್ತ ಸಂಕಷ್ಟದಲ್ಲಿರುವವರಿಗೆ ಈಗ ಅಲ್ಲು ಅರ್ಜುನ್ 25 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಸ್ವತಃ ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬದುಕಿನಲ್ಲಿ ಎದುರಿಸಿದ ಏರಿಳಿತಗಳ ಬಗ್ಗೆ ಮಾತನಾಡಿದ ಸಮಂತಾ

ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಕೇರಳದ ಜನರು ನನಗೆ ಯಾವಾಗಲೂ ತುಂಬಾ ಪ್ರೀತಿಯನ್ನು ನೀಡಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡಲು ಬಯಸುತ್ತೇನೆ. ನಿಮ್ಮೆಲ್ಲರ ಸುರಕ್ಷೆ ಮತ್ತು ಶಕ್ತಿಗಾಗಿ ಪ್ರಾರ್ಥಿಸುತ್ತೇನೆ ಎಂದು ಅಲ್ಲು ಅರ್ಜುನ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈಗ ನಟನ ನಡೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.

ಅಂದಹಾಗೆ, ವಯನಾಡು ಭೂಕುಸಿತ ದುರಂತ ಹಿನ್ನೆಲೆ ಈಗಾಗಲೇ ರಶ್ಮಿಕಾ ಮಂದಣ್ಣ (Rashmika Mandanna), ಸೂರ್ಯ ದಂಪತಿ, ಮಮ್ಮುಟ್ಟಿ, ಚಿಯಾನ್ ವಿಕ್ರಮ್, ದುಲ್ಕರ್ ಸಲ್ಮಾನ್ ಸೇರಿದಂತೆ ಅನೇಕರು ಕೇರಳದ ಸಿಎಂ ಫಂಡ್‌ಗೆ ಲಕ್ಷ ಲಕ್ಷ ದೇಣಿಗೆ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

Share This Article