ಚಂಡೀಗಢ: ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ವಿರುದ್ಧ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಪಂಜಾಬ್ನ ಉಪ ಮುಖ್ಯಮಂತ್ರಿ ಸುಖ್ಜಿಂದರ್ ಸಿಂಗ್ ರಾಂಧವ ಅವರು ಗುರುವಾರ ನಿರ್ಣಯವನ್ನು ಮಂಡಿಸಿದರು. ಕೇಂದ್ರದ ಅಧಿಸೂಚನೆಯು ರಾಜ್ಯ ಪೊಲೀಸರಿಗೆ ಅವಮಾನ ಮಾಡಿದೆ. ಕೂಡಲೇ ಅದನ್ನು ಹಿಂದಕ್ಕೆ ಪಡೆಯಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ?: ಬಿಜೆಪಿ ಟ್ವೀಟ್ ವಾರ್
ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರತಿ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಭಾರತದ ಸಂವಿಧಾನ ಹೇಳಿದೆ. ಅದಕ್ಕೆ ಪಂಜಾಬ್ ಸರ್ಕಾರ ಸಂಪೂರ್ಣ ಸಮರ್ಥವಾಗಿದೆ. ಕಾನೂನು ಸುವ್ಯವಸ್ಥೆ ಪಂಜಾಬ್ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರ ರಾಜ್ಯದೊಂದಿಗೆ ಸಮಾಲೋಚನೆ ನಡೆಸಬೇಕಿತ್ತು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಅಮರೀಂದರ್ ಸಿಂಗ್, ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ ಅಧಿಸೂಚನೆಯು ದೇಶದ ಭದ್ರತೆ ಹಿತದೃಷ್ಟಿಯನ್ನು ಒಳಗೊಂಡಿದೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಡಿಸೆಂಬರ್ನಲ್ಲಿ ರಾಜ್ಯಕ್ಕೆ ಪ್ರಧಾನಿ ಭೇಟಿ
ಪಂಜಾಬ್ ಪೊಲೀಸರಂತೆ ಬಿಎಸ್ಎಫ್ ನಮ್ಮದೇ ಪಡೆಯಾಗಿದೆ ಹೊರತು, ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳಲು ಬರುತ್ತಿರುವ ವಿದೇಶಿ ಸೇನೆಯಲ್ಲ ಎಂದು ಅಮರೀಂದರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕಳೆದ ತಿಂಗಳು ಬಿಎಸ್ಎಫ್ ಕಾಯ್ದೆಗೆ ತಿದ್ದುಪಡಿ ತಂದಿದೆ. ಬಿಎಸ್ಎಫ್ ಯೋಧರಿಗೆ ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯದ ಅಂತಾರಾಷ್ಟ್ರೀಯ ಗಡಿಯಲ್ಲಿ ಶೋಧಕಾರ್ಯ ನಡೆಸುವುದು, ವಶಪಡಿಸಿಕೊಳ್ಳುವುದು, ಬಂಧಿಸುವಂತಹ ವ್ಯಾಪ್ತಿಯ ಮಿತಿಯನ್ನು 15 ಕಿ.ಮೀ.ನಿಂದ 50 ಕಿ.ಮೀ.ಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ.