ಛತ್ತೀಸಗಢ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತು ಪಂಜಾಬ್ ಸಂಸದರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಗತ್ ಸಿಂಗ್ ಒಬ್ಬ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದಾರೆ.
ಶಿರೋಮಣಿ ಅಕಾಲಿ ದಳ ಪಕ್ಷದ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಈ ಹೇಳಿಕೆ ನೀಡಿದ್ದು, ಭಾರೀ ವಿವಾದ ಸೃಷ್ಟಿಯಾಗಿದೆ. ಭಗತ್ ಸಿಂಗ್ ಇಂಗ್ಲಿಷ್ ನೌಕಾ ಅಧಿಕಾರಿಯನ್ನು ಕೊಂದರು. ಅಮೃತಧಾರಿ ಸಿಖ್ ಕಾನ್ಸ್ಟೆಬಲ್ ಚನ್ನನ್ ಸಿಂಗ್ನನ್ನು ಕೊಂದರು. ಆ ಸಮಯದಲ್ಲಿ ಅವರು ರಾಷ್ಟ್ರೀಯ ಅಸೆಂಬ್ಲಿಯ ಮೇಲೆ ಬಾಂಬ್ ಎಸೆದರು. ಈಗ ನೀವೇ ಹೇಳಿ.. ಭಗತ್ ಸಿಂಗ್ ಭಯೋತ್ಪಾದಕನೋ ಅಲ್ಲವೋ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದ ಗೋಡೆ ಕುಸಿದು 5 ಸಾವು – 9 ಮಂದಿಗೆ ಗಾಯ
ಸಂಸದ ಮಾನ್ ಅವರು ಪಂಜಾಬ್ ರಾಜಕೀಯದಲ್ಲಿ ವಿವಾದಾತ್ಮಕ ಹೇಳಿಕೆಗಳಿಂದಲೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ತವರು ಸಂಗ್ರೂರ್ನಿಂದ ಉಪಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿ, ತಮ್ಮ ಗೆಲುವಿಗೆ ಖಲಿಸ್ತಾನಿ ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಕಾರಣ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಕಾಶ್ಮೀರದಲ್ಲಿ ಭಾರತೀಯ ಸೇನೆಯ ದೌರ್ಜನ್ಯದ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ಮತ್ತೊಂದು ಕಡೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು.
ಬಿಹಾರ ಮತ್ತು ಛತ್ತೀಸ್ಗಢದಲ್ಲಿರುವ ಬುಡಕಟ್ಟು ಜನರು ನಕ್ಸಲರು. ಅವರನ್ನು ಹತ್ಯೆ ಮಾಡಬೇಕು ಎಂದು ಸಹ ಸಿಮ್ರಂಜಿತ್ ಸಿಂಗ್ ಮಾನ್ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ದೇಶದ ಟಾಪ್ ಕಾಲೇಜುಗಳ ಪಟ್ಟಿ ಔಟ್ – ಕರ್ನಾಟಕದ ಯಾವ ಕಾಲೇಜುಗಳಿಗೆ ಎಷ್ಟನೇ ಸ್ಥಾನ?
ಭಗತ್ ಸಿಂಗ್ ಕುರಿತು ಮಾನ್ ಹೇಳಿಕೆಗೆ ಪಂಜಾಬ್ ಆಡಳಿತಾರೂಢ ಎಎಪಿ ಕಿಡಿಕಾರಿದೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ. ತಮ್ಮ ಹೇಳಿಕೆಗೆ ಅವರು ಕ್ಷಮೆಯಾಚಿಸಬೇಕು ಎಂದು ಎಎಪಿ ಒತ್ತಾಯಿಸಿದೆ.
ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಕರೆದಿರುವುದು ನಾಚಿಕೆಗೇಡಿನ ಸಂಗತಿ. ಶಹೀದ್-ಎ-ಆಜಂ ಭಗತ್ ಸಿಂಗ್ ಒಬ್ಬ ವೀರ, ದೇಶಭಕ್ತ, ಕ್ರಾಂತಿಕಾರಿ ಮತ್ತು ನಿಜವಾದ ಮಣ್ಣಿನ ಮಗ. ಇಂಕ್ವಿಲಾಬ್ ಜಿಂದಾಬಾದ್” ಎಂದು ಎಎಪಿ ಸಂಸದ ರಾಘವ್ ಚಡ್ಡಾ ಟ್ವೀಟ್ ಮಾಡಿದ್ದಾರೆ.