– ಚುನಾವಣಾ ಆಯೋಗ ಎಡವಟ್ಟಿಗೆ ವ್ಯಾಪಕ ಆಕ್ರೋಶ
ಚಂಡೀಗಢ: ಮತದಾನ ಜಾಗೃತಿ ಬ್ಯಾನರ್ ನಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಫೋಟೋ ಹಾಕಿ ಪಂಜಾಬ್ ಚುನಾವಣಾ ಆಯೋಗವು ಎಡವಟ್ಟು ಮಾಡಿಕೊಂಡಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿ ಬ್ಯಾನರ್ ಗಳನ್ನು ಹೋಶಿಯಾರ್ಪುರದ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಹಾಕಲಾಗಿತ್ತು. ಆದರೆ ಯಾರೊಬ್ಬರೂ ಇದನ್ನು ಗಮನಿಸಿರಲಿಲ್ಲ. ಚುನಾವಣೆ ಮುಗಿದು 2 ತಿಂಗಳು ಕಳೆದ ನಂತರ ಶುಕ್ರವಾರ ವ್ಯಕ್ತಿಯೊಬ್ಬರು ಚುನಾವಣಾ ಆಯೋಗದಿಂದ ಆಗಿರುವ ಎಡವಟ್ಟನ್ನು ಪತ್ತೆ ಹಚ್ಚಿದ್ದಾರೆ. ಈ ಮತದಾನ ಜಾಗೃತಿ ಬ್ಯಾನರ್ ನಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ಫೋಟೋವನ್ನು ಮುದ್ರಿಸಲಾಗಿದೆ.
ಚುನಾವಣಾ ಆಯೋಗ ಎಡವಟ್ಟನ್ನು ಜನಸಾಮಾನ್ಯರು ಗುರುತಿಸಿದ್ದು, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಅಧಿಕಾರಿಗಳ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಂಜಾಬ್ ಕ್ಯಾಬಿನೆಟ್ ಸಚಿವ ಶ್ಯಾಮ್ ಅರೋರ್ ಅವರು, ಗೊತ್ತಿಲ್ಲದೆ ಚುನಾವಣಾ ಆಯೋಗದ ಅಧಿಕಾರಿಗಳು ಫೋಟೋವನ್ನು ಹಾಕಿರಬಹುದು. ತಪ್ಪಾದ ಗುರುತಿನ ಪತ್ರವನ್ನು ಅಧಿಕಾರಿಗಳು ಬಳಸಿರಬಹುದು. ಈ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಖೇಶ್ ಸಿಂಗ್ 2012ರಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿ. ಮುಖೇಶ್ ಸಿಂಗ್, ನಾನು ಅಪರಾಧ ಎಸಗಿಲ್ಲ. ಕೇವಲ ಬಸ್ ಜಾಲನೆ ಮಾಡುತ್ತಿದ್ದೆ ಎಂದು ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದ. ಆತನನ್ನು ಸೇರಿದಂತೆ ಒಟ್ಟು 4 ಜನ ಅಪರಾಧಿಗಳಿಗೆ ದೆಹಲಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅಪರಾಧಿಗಳು ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.