ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸುನಾಮಿಗೆ ಕಾಂಗ್ರೆಸ್ ತತ್ತರಿಸಿ ಹೋಗಿದೆ. ಪಂಜಾಬ್ನ ಕಾಂಗ್ರೆಸ್ ಪ್ರಭಾವಿ ನಾಯಕರೇ ಸೋಲಿನ ಬಿಸಿ ಅನುಭವಿಸಿದ್ದಾರೆ.
ಪಂಜಾಬ್ನಲ್ಲಿ ಅದ್ಭುತ ನಡೆದಿದೆ. ಪೊರಕೆ ಗುರುತಿನ ಪಕ್ಷ ಆಮ್ ಆದ್ಮಿಗಳ ಅಖಂಡ ಆಪ್ ಕಿ ಸರ್ಕಾರ್ ಬಂದಿದೆ. ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿವೆ. ಕೇಜ್ರಿವಾಲ್ ಅವರ ಏಕ್ ಮೌಕಾ ನಿನಾದ ಫಲಿಸಿದೆ. ಆಮ್ ಆದ್ಮಿ ಕನ್ವಿನರ್ ಕೇಜ್ರಿವಾಲ್ ಪ್ರಕಟಿಸಿದ ಮ್ಯಾನಿಫೆಸ್ಟೋ ಮತ್ತು ಭರವಸೆಗಳಿಗೆ ಪಂಜಾಬಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ
ಮುಖ್ಯವಾಗಿ ಏಕ್ ಮೌಕಾ ಕೇಜ್ರಿವಾಲ್, ಏಕ್ ಮೌಕಾ ಭಗವಂತ್ ಮನ್ ಘೋಷಣೆಗಳು ಜನ ಮನಗೆದ್ದಿದೆ. ಆಮ್ ಆದ್ಮಿಗಳು ಪಂಜಾಬ್ನಲ್ಲಿ ಲ್ಯಾಂಡ್ಸ್ಲೈಡ್ ವಿಕ್ಟರಿ ಸಾಧಿಸಿದ್ದಾರೆ. ಮೊದಲೇ ನಾಯಕತ್ವ ಕಚ್ಚಾಟದಲ್ಲಿ ಮುಳುಗಿದ್ದ ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ಮತದಾರರು ತಿರಸ್ಕರಿಸಿದ್ದಾರೆ. ಶತಮಾನದ ಪಕ್ಷ ಧೂಳೀಪಟವಾಗಿದೆ. ಪಂಜಾಬ್ನಲ್ಲಿನ ಎಎಪಿ ವೇವ್ 2015ರ ದೆಹಲಿ ಫಲಿತಾಂಶವನ್ನು ನೆನಪಿಸಿದೆ.
ಸಿಎಂ ಚನ್ನಿ, ಸಿಧು, ಅಮರಿಂದರ್ ಸಿಂಗ್, ಪ್ರಕಾಶ್ ಸಿಂಗ್ ಬಾದಲ್ ಸೇರಿ ಘಟಾನುಘಟಿಗಳೆಲ್ಲಾ ಮನೆ ಸೇರಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಿಎಂ ಚನ್ನಿಯನ್ನು ಸೋಲಿಸಿದ್ದು ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಕಾಮನ್ ಮ್ಯಾನ್. ಫೋನ್ ಕಾಲ್ ಸ್ಪಂದನೆ ಮೂಲಕ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ರಾಜಭವನದಲ್ಲಿ ಅಲ್ಲ. ತಮ್ಮ ಪೂರ್ವಿಕರ ಗ್ರಾಮ ಕಟ್ಕರ್ ಕಲನ್ನಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು ಭಗತ್ ಸಿಂಗ್ ಹುಟ್ಟೂರು ಕೂಡ ಹೌದು. ಅಂದ ಹಾಗೇ ಭಗವಂತ್ ಮಾನ್ ಒಂದು ಕಾಲದಲ್ಲಿ ಹಾಸ್ಯ ನಟ. ಇನ್ನು ಸಿಎಂ ಚನ್ನಿ ನಾಳೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಭಗವಂತ್ ಮಾನ್ ಭರ್ಜರಿ ಜಯ- ಭಗತ್ ಸಿಂಗ್ ಹುಟ್ಟೂರಲ್ಲಿ ಪ್ರಮಾಣ ವಚನ
ಪಂಜಾಬ್ನಲ್ಲಿ ಆಪ್ ಕಿ ಸರ್ಕಾರ್
ಒಟ್ಟು ಸ್ಥಾನಗಳು 117, ಬಹುಮತಕ್ಕೆ 59
ಎಎಪಿ- 92
ಕಾಂಗ್ರೆಸ್- 18
ಅಕಾಲಿ ದಳ- 03
ಬಿಎಸ್ಪಿ- 01
ಬಿಜೆಪಿ- 02
ಇತರರು- 01
2017ರಲ್ಲಿ ಪಂಜಾಬ್ ಫಲಿತಾಂಶ ಹೀಗಿತ್ತು:
ಕಾಂಗ್ರೆಸ್ 77, ಆಪ್ 20, ಎಸ್ಎಡಿ+ ಬಿಜೆಪಿ 18, ಇತರರು 02