ಕಲೆ ಮತ್ತು ತಂತ್ರಜ್ಞಾನದ ಮೂಲಕ ವಿದೇಶಿ ಕಲಾವಿದರಿಂದ ತಯಾರಾದ ಪಿಆರ್ಕೆ ಕಲಾಕೃತಿ ಇಂದು (ಅ.16) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅನಾವರಣ ಆಗಿದೆ. ಪುನೀತ್ ಹುಟ್ಟು ಹಾಕಿರೋ ಪಿಆರ್ಕೆ ಸ್ಟುಡಿಯೋಸ್ ಸಹಯೋಗದಲ್ಲಿ ಅಪ್ಪು ಕಲಾಕೃತಿ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ಕುಟುಂಬದ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಕೂಡ ಸಾಥ್ ನೀಡಿದರು. ಇದನ್ನೂ ಓದಿ:ನನ್ನ ಲೈಫ್ನಲ್ಲಿ ಮಾಡಿದ ಕೆಲಸಕ್ಕೆ ಗೌರವ ಸಿಕ್ಕಿಲ್ಲ- ‘ಚಾರ್ಲಿ’ ನಟಿ ಕಣ್ಣೀರು
ಅಪ್ಪು ಪ್ರತಿಮೆಗೆ ಮುತ್ತು ನೀಡಿ ಮಾತು ಶುರು ಮಾಡಿದ ರಾಘಣ್ಣ, ಈ ತಿಂಗಳ 29ಕ್ಕೆ ಅಪ್ಪು ಅಗಲಿ ಎರಡು ವರ್ಷ ಆಗಲಿದೆ. ಇಂದು ಈ ಪ್ರತಿಮೆ ಪ್ರೀತಿಯಿಂದ ತಯಾರಾಗಿದೆ. ಈ ಪ್ರತಿಮೆಯನ್ನು ಕಷ್ಟ ಪಟ್ಟು ಮಾಡಿಲ್ಲ, ಇಷ್ಟ ಪಟ್ಟು ಮಾಡಿದ್ದಾರೆ. ಅಪ್ಪು ಕೈಯಲ್ಲಿ ಯಾವಾಗಲೂ ಗನ್ ಅಥವಾ ಕ್ಯಾಮೆರಾ ಇರುತ್ತಿತ್ತು. ಅಪ್ಪ ಅವನಿಗಾಗಿ ಫಾರಿನ್ನಿಂದ ಕ್ಯಾಮೆರಾ ತರಿಸಿಕೊಟ್ಟಿದ್ದರು ಎಂದು ಹಿಂದಿನ ದಿನಗಳನ್ನ ಮೆಲುಕು ಹಾಕಿದರು. ಅಪ್ಪು ಅಣ್ಣನಾಗಿ ಹುಟ್ಟಿದ್ದು ನನ್ನ ಪುಣ್ಯ ಎಂದಿದ್ದಾರೆ. ಈ ವೇಳೆ, ಪುನೀತ್ ಹುಟ್ಟಿದ ಮಾರ್ಚ್ 17 ದಿನಾಂಕ ಸ್ಫೂರ್ತಿ ದಿನ ಅಂತ ಅನೌನ್ಸ್ ಮಾಡಿ ಮುನ್ನೆಲೆಗೆ ತನ್ನಿ ಎಂದು ಸಿಎಂಗೆ ರಾಘಣ್ಣ (Raghavendra Rajkumar) ಮನವಿ ಮಾಡಿದ್ದರು.
ಪುನೀತ್ ಕಲಾಕೃತಿಯನ್ನ ಆಂತ್ರಾಪೋಸ್ಟಾ ತಂತ್ರಜ್ಞಾನ ಬಳಸಿ ಮಾಡಲಾಗಿದ್ದು, ಇದಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಿದ್ದೇನೆ ಎಂದು ಕಲಾವಿದ ವಿಚಾರ್ ಮಾತನಾಡಿದ್ದಾರೆ. ಆಸ್ಕರ್ ವಿನ್ನಿಂಗ್ ಅವತಾರ್ ಮೂವಿಗೆ ಬಳಸಿರೋ Z ಬ್ರಷ್ ಸಾಫ್ಟ್ವೇರ್ ಬಳಸಿ ಮಾಡಲಾಗಿದೆ. ಬೇರೆ ಬೇರೆ ರೀತಿಯ ಲೈಟಿಂಗ್ ಬಳಸಿ ಮಾಡಲಾಗಿದೆ. ಡಿಜಿಟಲ್ನಲ್ಲಿ ಮಾಡಿ, ತ್ರೀಡಿಯಲ್ಲಿ ಮಾಡಿದ್ದೇನೆ. ಇದು ನನ್ನ ಬಹಳ ದಿನದ ಕನಸು ಕನಸಾಗಿತ್ತು. ಈಗ ನನಸಾಗಿದೆ ಎಂದು ಕಲಾವಿದ ವಿಚಾರ್ ಹೇಳಿದ್ದಾರೆ.
ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಇಂದು ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅವರ ಪ್ರತಿಮೆ ಅನಾವರಣ ಮಾಡಿದ್ದೇವೆ. ಈ ಪ್ರತಿಮೆಯನ್ನ N3K ಸ್ಟುಡಿಯೋಸ್- ಪಿಆರ್ಕೆ ಸ್ಟುಡಿಯೋಸ್ ಸಹಯೋಗದಲ್ಲಿ ಮಾಡಿದ್ದಾರೆ. ಕರ್ನಾಟಕ ಕಂಡಂತಹ ಸರಳ, ಸೌಜನ್ಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಪುನೀತ್ ಅವರಾಗಿದ್ದರು. ಇಡೀ ಕರ್ನಾಟಕದಲ್ಲಿ ಬಹುಶಃ ಇವರಷ್ಟು ಅಭಿಮಾನಿಗಳನ್ನ ಯಾರೂ ಪಡೆದುಕೊಂಡಿರಲಿಲ್ಲ ಎಂದು ಸಿಎಂ ಮಾತನಾಡಿದ್ದಾರೆ.
ಬಳಿಕ ಮತ್ತೆ ಮಾತು ಮುಂದುವರಿಸಿ, ಪುನೀತ್ ಅಕಾಲಿಕ ಮರಣಕ್ಕೆ ತುತ್ತಾದಾಗ ಪ್ರತಿಯೊಂದು ಕುಟುಂಬ ತಮ್ಮ ಮನೆಯಲ್ಲೇ ಸಾವಾಗಿದೆ ಅನ್ನೋ ತರಹ ನೋವು ಅನುಭವಿಸಿದರು. ಇಂದು ಪ್ರತೀ ಮನೆಯಲ್ಲಿ ಪುನೀತ್ ಅವರ ಭಾವಚಿತ್ರಗಳಿವೆ. ಬಹುಶಃ ನಾವು ಮತ್ತೊಬ್ಬ ಪುನೀತ್ ಅಂತಹ ವ್ಯಕ್ತಿಯನ್ನ ನೋಡೋದು ಕಷ್ಟ ಎಂದಿದ್ದಾರೆ. ನನಗೆ ಡಾ.ರಾಜ್ಕುಮಾರ್ ಅವರ ಜೊತೆ ಉತ್ತಮ ಒಡನಾಟವಿದೆ. ಪುನೀತ್ ಅವರ ಜನಪ್ರಿಯತೆ ರಾಜ್ಕುಮಾರ್ ಅವರನ್ನ ಮೀರಿಸಿದೆ ಎಂದು ಸಿಎಂ ಹಾಡಿಹೊಗಳಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಿಎಂ ಸಿದ್ದರಾಮಯ್ಯ, ಅಶ್ವಿನಿ ಪುನೀತ್, ರಾಘವೇಂದ್ರ ರಾಜ್ಕುಮಾರ್, ಯುವ, ಧನ್ಯಾ ರಾಮ್ಕುಮಾರ್, ಭೈರತಿ ಸುರೇಶ್ ಕೂಡ ಭಾಗಿಯಾಗಿದ್ದರು.