ಬೆಂಗಳೂರು: ಆರು ಕೋಟಿ ಜನರ ಪರವಾಗಿ ಅಪ್ಪುಗೆ ನಾನು ಆ ಮುತ್ತು ಕೊಟ್ಟೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕವಾಗಿ ನುಡಿದರು.
ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ರಾಜ್ಕುಮಾರ್ ಒಂದು ಮುತ್ತು. ಬಾಲಕನಿಂದಲೂ ಆತ ಅದ್ಭುತ ನಟ. ತಂದೆಯಂತೆಯೇ ನಯ-ವಿನಯ ರೂಢಿಸಿಕೊಂಡು ಬೆಳೆದರು ಅಪ್ಪು. ಅವರ ಅಂತಿಮ ದರ್ಶನವನ್ನೂ ಅಭಿಮಾನಿಗಳು ಯಾವುದೇ ತೊಂದರೆಯಾಗದಂತೆ ನಡೆಸಿಕೊಡಲು ಅನುವು ಮಾಡಿಕೊಟ್ಟರು. ತನ್ನ ನಟನೆಯ ಮೂಲಕವೇ ಆರು ಕೋಟಿ ಜನರ ಮನಸ್ಸನ್ನು ಆಕರ್ಷಿಸಿದ್ದ ಅಪ್ಪು. ಅಭಿಮಾನಿಗಳ ಪರವಾಗಿ ನಾನು ಪುನೀತ್ ಹಣೆಗೆ ಮುತ್ತುಕೊಟ್ಟೆ ಎಂದು ನೆನೆದರು.
ಕನ್ನಡ ನಾಡು ಕಂಡ ಶ್ರೇಷ್ಠ ನಟ ಡಾ. ರಾಜ್ಕುಮಾರ್ ಅವರೊಂದಿಗೆ ಸಣ್ಣ ವಯಸ್ಸಿನಲ್ಲೇ ಪುನೀತ್ ಅವರು ಪ್ರತಿ ನಟನಾಗಿ ಅದ್ಭುತವಾಗಿ ನಟಿಸಿದ್ದರು. ತಂದೆ ಎಂಬುದನ್ನೂ ಮರೆತು ಪಾತ್ರಕ್ಕೆ ಅನುಗುಣವಾಗಿ ನಟಿಸುವುದು ಸುಲಭವಲ್ಲ. ಅದನ್ನು ಅಪ್ಪು ಮಾಡಿ ತೋರಿಸಿದರು ಎಂದು ನೆನೆದರು. ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ- ಸಿಎಂ ಘೋಷಣೆ
ಅಪ್ಪು ನಮ್ಮೆಲ್ಲರಿಗೂ ಬಹಳ ಆತ್ಮೀಯ. ಅವರನ್ನು ನಾನು ಬಾಲ್ಯದಿಂದಲೂ ಬಲ್ಲೆ. ಬಾಲ್ಯದಲ್ಲೇ ಪ್ರತಿಭೆಯ ಚಿಲುಮೆ ಹೊಂದಿದ್ದವರು ಅಪ್ಪು. ಕರ್ನಾಟಕ ಇತಿಹಾಸದಲ್ಲೇ ಬಾಲನಟನಾಗಿ ಪ್ರಶಸ್ತಿ ಪಡೆದುಕೊಂಡದ್ದು ಹೆಗ್ಗಳಿಕೆ ಎಂದು ತಿಳಿಸಿದರು.
ನಟನೆ, ಸ್ಥಿತಿವಂತಿಕೆಯೊಂದಿಗೆ ನಯ-ವಿನಯ ಪುನೀತ್ ರಾಜ್ಕುಮಾರ್ ಅವರಲ್ಲಿತ್ತು. ಪರೋಪಕಾರವನ್ನು ಮಾಡಿಯೂ ಮಾಡದಂತೆ ಇದ್ದರು ಅಪ್ಪು. ಶರಣರನ್ನು ಮರಣದಲ್ಲಿ ನೋಡಿ ಎನ್ನುತ್ತಾರೆ ದೊಡ್ಡವರು. ಮರಣದ ನಂತರ ಜನರು ಪುನೀತ್ ಬಗ್ಗೆ ತಮ್ಮ ಭಾವನೆ, ಅನುಭವವನ್ನು ವ್ಯಕ್ತಪಡಿಸಿದ್ದು ಆತನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಅಪ್ಪುವಿನ ಪರಿಪೂರ್ಣ ವ್ಯಕ್ತಿತ್ವ ಕನ್ನಡ ನಾಡಿಗೆ ಪರಿಚಯವಾಗಿದೆ ಎಂದರು. ಇದನ್ನೂ ಓದಿ: ಎಲ್ಲರನ್ನೂ ಕಾಡಲು ಶುರು ಮಾಡಿದೆ ಕಡಲ ತೀರದ ಭಾರ್ಗವ ಚಿತ್ರದ ‘ಸಮಯವೇ’ ಲಿರಿಕಲ್ ವೀಡಿಯೋ ಸಾಂಗ್
ಅಪ್ಪು ನೆನಪು ಚಿರಸ್ಥಾಯಿಯಾಗಬೇಕು ಎಂದು ಹಲವಾರು ಸಲಹೆ-ಸೂಚನೆಗಳು ಬಂದಿವೆ. ಇದು ಸರ್ಕಾರದ ಅಭಿಲಾಶೆಯೂ ಆಗಿದೆ. ಅಪ್ಪುವಿನ ಅಂತಿಮ ದರ್ಶನದ ಸ್ಥಳವನ್ನು ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರ ಸ್ಥಳದಂತೆಯೇ ರೂಪಿಸಲಾಗುವುದು ಎಂದು ಹೇಳಿದರು.