ಬೆಂಗಳೂರು: ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ ನಾಲ್ಕು ದಿನ ಕಳೆದಿದ್ದು, 5ನೇ ದಿನದ ಹಾಲು ತುಪ್ಪ ಕಾರ್ಯ ಮುಗಿಯುವವರೆಗೂ ಸಮಾಧಿ ವೀಕ್ಷಣೆಗೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿದೆ. ನಾಳೆ ಸಮಾಧಿ ವೀಕ್ಷಣೆಗಾಗಿ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಸಾಧ್ಯತೆ ಇರುವ ಕಾರಣ ಸದ್ಯ ಕಂಠೀರವ ಸ್ಟೂಡಿಯೋ ಬಳಿ ಪೊಲೀಸರು ಬಿಗಿ ಭದ್ರತೆಗೊಳಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮಣ್ಣಲ್ಲಿ ಮಣ್ಣಾಗಿ ಒಂದು ದಿನ ಕಳೆದಿದ್ದು, ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋ ಪ್ರವೇಶವನ್ನು ನಿಷೇಧಿಸಲಾಗಿದೆ. ಈಗಾಗಲೇ ಪುನೀತ್ ಅವರ ಅನೇಕ ಅಭಿಮಾನಿಗಳು ಕಂಠೀರವ ಸ್ಟುಡಿಯೋಸ್ ಬಳಿ ಬಂದು ವಾಪಾಸ್ ಆಗುತ್ತಿದ್ದಾರೆ. ಇದನ್ನೂ ಓದಿ: ಅಪ್ಪುರನ್ನು ಪ್ರತಿ ದಿನವೂ ಆರಾಧಿಸೋಣ: ರಮ್ಯಾ
ನಾಳೆ ಅಪ್ಪು ಸಮಾಧಿಗೆ ಕುಟುಂಬಸ್ಥರು ಹಾಲುತುಪ್ಪ ಕಾರ್ಯನೆರವೇರಿಸಲಿದ್ದು, ಕೇವಲ ವಿಐಪಿಗಳು ಹಾಗೂ ಕುಟುಂಬ ಸದಸ್ಯರನ್ನ ಹೊರತುಪಡಿಸಿ ಬೇರೆ ಯಾರೂ ಸಹ ಕಂಠೀರವ ಸ್ಟುಡಿಯೋ ಒಳಗೆ ಬರುವಂತಿಲ್ಲ. ಹೀಗಾಗಿ ಕಂಠೀರವ ಸ್ಟುಡಿಯೋ ಬಳಿ ಸಂಪೂರ್ಣ ಬ್ಯಾರಿಗೇಡ್ ಹಾಕಿ ಆರ್ಎಎಫ್ ಕಮಾಂಡೋ ಪಡೆ, ಎರಡು ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಪ್ಪುಗೆ ವಿಶೇಷ ವಿದಾಯ ಹೇಳಿದ ತೆಲುಗು ಅಭಿಮಾನಿ
ಈ ಮಧ್ಯೆ ಅಭಿಮಾನಿಯೊಬ್ಬರು ದಿವಂಗತ ಪುನೀತ್ ರಾಜ್ ಕುಮಾರ್ ಸಮಾಧಿಗೆ ಹಾಕಲು ಸುಗಂಧರಾಜ ಹಾಗೂ ಚೆಂಡುಹೂವಿನ ಹಾರವನ್ನು ತಂದಿದ್ದಾರೆ. ಆದರೆ ಒಳಗೆ ಹೋಗಲು ಅವಕಾಶ ಇಲ್ಲದ ಹಿನ್ನೆಲೆ ಪೋಲಿಸ್ ಸಿಬ್ಬಂದಿಗೆ ಹೂ ಕೊಟ್ಟು ಹೋಗಿದ್ದಾರೆ.