ಬಳ್ಳಾರಿ: ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಕಲಾ ವಿಭಾಗದಲ್ಲಿ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದ ಕೊಟ್ಟಪ್ಪ ಮತ್ತು ರತ್ನಮ್ಮ ದಂಪತಿಯ ಪುತ್ರಿ ಸ್ವಾತಿ ಬಡತನದಲ್ಲಿ ಓದಿ 585 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕೂಲಿ ಕಾರ್ಮಿಕರ ಮಗಳಾಗಿರುವ ಸ್ವಾತಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಷಯ ತಿಳಿಯುತ್ತಿದ್ದಂತೆ ಇಂದು ಕಾಲೇಜಿನಲ್ಲಿ ಸಂಭ್ರಮ ಮನೆ ಮಾಡಿತ್ತು. ಕಾಲೇಜಿನ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸ್ವಾತಿಗೆ ಸಿಹಿ ತಿನಿಸಿ ಶುಭಾಶಯ ಕೋರಿದರು. ಇನ್ನೂ ಇದೇ ಇಂದು ಕಾಲೇಜಿನ ರಮೇಶ್ 593 ಹಾಗೂ ಗೊರವ ಕಾವ್ಯಾಂಜಲಿ 588 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇಂದು ಕಾಲೇಜು ಕಳೆದ ಮೂರು ವರ್ಷಗಳಿಂದ ಕಲಾ ವಿಭಾಗದಲ್ಲಿ ಸತತವಾಗಿ ಪ್ರಥಮ ಸ್ಥಾನ ಪಡೆಯುತ್ತಿರುವುದು ಸಹ ಮತ್ತೊಂದು ದಾಖಲೆಯಾಗಿದೆ. ಸ್ವಾತಿ ಒಟ್ಟು 595 ಅಂಕಗಳನ್ನು ಪಡೆದಿದ್ದು, ಕನ್ನಡ (98), ಸಂಸ್ಕೃತ (99), ಐಚ್ಚಿಕ ಕನ್ನಡ(99) ಇತಿಹಾಸ(100), ರಾಜ್ಯಶಾಸ್ತ್ರ (99) ಮತ್ತು ಶಿಕ್ಷಣ(100) ಅಂಕಗಳನ್ನು ಪಡೆದಿದ್ದಾರೆ.