ತುಮಕೂರು: ಕಣ್ಣು ಕಾಣದಿದ್ದರೂ ಸುಶ್ರಾವ್ಯವಾಗಿ ಹಾಡುವುದು ಹಾಗೂ ಸಂಗೀತ ವಾದ್ಯಗಳನ್ನ ನುಡಿಸಲು ಕಲಿತಿರುವ ಅಂಧ ಕಲಾವಿದರಿಗೆ ಸಹಾಯ ಬೇಕಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದ ಕಲಾವಿದರಾದ ಇವರು, ಹುಟ್ಟು ಅಂಧರು. ಆದರೆ ಮನೆಯವರಿಗೆ ಹೊರೆಯಾಗದೆ ಸ್ವಾಭಿಮಾನದಿಂದ ಬದುಕಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದಾರೆ. ಇದಕ್ಕಾಗಿ ಕಷ್ಟಪಟ್ಟು ಅಭ್ಯಾಸ ಮಾಡಿ ಸಂಗೀತ ವಾದ್ಯ ನುಡಿಸಲು ಹಾಗೂ ಹಾಡೊಂದನ್ನು ಕಲಿತಿದ್ದಾರೆ.
ಸದ್ಯ ಆರ್ಕೆಸ್ಟ್ರಾದಲ್ಲಿ ಸಂಗೀತ ನುಡಿಸುತ್ತಾ ಸುಶ್ರಾವ್ಯವಾಗಿ ಹಾಡುತ್ತಿರುವ ಇವರು ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಸಂಗೀತದಿಂದಲೇ ಸಾಧನೆ ಮಾಡುವ ಹಂಬಲದಿಂದ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಮಡಿಕೇರಿ, ದಾವಣಗೆರೆ, ಉತ್ತರಕನ್ನಡದ ಅಂಧ ಕಲಾವಿದರು ಈ ತಂಡದಲ್ಲಿ ಇದ್ದು, ಆಳ್ವಾಸ್ ನುಡಿಸಿರಿ ಸೇರಿದಂತೆ ಹಲವು ಸಮಾರಂಭಗಳಲ್ಲಿ ಕಾರ್ಯಕ್ರಮಗಳನ್ನು ಕೊಟ್ಟು ಪ್ರಶಂಸೆ ಪಡೆದುಕೊಂಡಿದ್ದಾರೆ. ಆದರೆ ಬಾಡಿಗೆಗೆ ಸಂಗೀತ ಸಾಧನಗಳನ್ನು ಪಡೆದುಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಬಂದ ಅಲ್ಪ ಸ್ವಲ್ಪ ಹಣ ಬಾಡಿಗೆಗೆ ನೀಡಬೇಕಿದೆ.
ಸಂಗೀತ ವಾದ್ಯಗಳನ್ನು ಬಾಡಿಗೆ ಪಡೆದು ಉಳಿದ ಹಣದಲ್ಲಿ ಎಲ್ಲಾ ಕಲಾವಿದರು ಜೀವನ ನಡೆಸಲು ಕಷ್ಟವಾಗುತ್ತಿದ್ದು, ಯಾರಾದ್ರೂ ದಾನಿಗಳು ಸಂಗೀತ ಸಲಕರಣೆಗಳ ನೆರವು ನೀಡಿದರೆ ತಮ್ಮ ಜೀವನಕ್ಕೆ ನೆರವಾಗುತ್ತದೆ ಎಂದು ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
https://www.youtube.com/watch?v=aEApGRGIOqw
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com