ಬೆಂಗಳೂರು: ತೊಣಚಿನಕುಪ್ಪೆಯ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಅಂಜನ್ ಆಟ ಪಾಠದಲ್ಲಿ ಸದಾ ಮುಂದು. ಅತ್ಯಂತ ಚಟುವಟಿಕೆಯಿಂದ ಇರೋ ಬಾಲಕ ಎರಡು ವರ್ಷದ ಹಿಂದೆ ಮನೆ ಬಳಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಗೊತ್ತಿಲ್ಲದೇ ವಿದ್ಯುತ್ ತಂತಿ ತಗಲಿ ತನ್ನ ಬಲಗೈಯನ್ನೇ ಕಳೆದುಕೊಂಡ ನತದೃಷ್ಟ ಬಾಲಕ.
ಬೆಂಗಳೂರು ಹೊರವಲಯ ನೆಲಮಂಗಳ ತಾಲೂಕಿನ ತೊಣಚಿನಕುಪ್ಪೆ ಗ್ರಾಮದ ನಿವಾಸಿಗಳಾದ ಪ್ರೇಮ್ ಕುಮಾರ್ ಮತ್ತು ಭಾಗ್ಯಲಕ್ಷ್ಮಿ ದಂಪತಿಯ ಪುತ್ರ ಅಂಜನ್. ಮಗನ ಚೀರಾಟ, ನರಳಾಟದ ಕಂಡ ತಂದೆ ಪ್ರೇಮ್ ಕುಮಾರ್ಗೆ ಹೃದಯಾಘಾತವಾಗಿ ಸಾವನ್ನಪಿದ್ದಾರೆ. ಗಂಡ ತೀರಿ ಹೋದ ನಂತರ ಗಂಡನ ಮನೆಯವರು ಕೈ ಬಿಟ್ಟಿದ್ದು ಪತ್ನಿ ಮತ್ತು ಇಬ್ಬರು ಮಕ್ಕಳು ಅಕ್ಷರಶಃ ಅನಾಥವಾಗಿದ್ದಾರೆ.
ಯಾರ ಸಹಾಯ ಬಯಸದೇ ಒಬ್ಬಂಟಿ ಜೀವನ ಮಾಡುತ್ತಾ ಗಾರ್ಮೆಂಟ್ಸ್ ನಲ್ಲಿ ಕೂಲಿ ಕೆಲಸ ಮಾಡುತ್ತಿರುವ ತಾಯಿ ಭಾಗ್ಯಲಕ್ಷ್ಮಿ ಮಕ್ಕಳ ಏಳಿಗೆಗೆ ಶ್ರಮ ಪಡುತ್ತಿದ್ದಾರೆ. ಇನ್ನೂ ಬಾಲಕ ಅಂಜನ್ ಎಡಗೈಯಲ್ಲಿ ಎಲ್ಲಾ ಕೆಲಸವನ್ನ ತಾನೇ ಮಾಡಿಕೊಳ್ಳುತ್ತಿದ್ದು, ಊಟ ಆಟ ಬರೆಯೋದು ಎಲ್ಲವೂ ಎಡಗೈಯಲ್ಲಿಯೇ. ಅಷ್ಟೇ ಅಲ್ಲ ಶಾಲೆಯ ಶಿಕ್ಷಕರೇ ತಮ್ಮ ಕೈಲಾದ ಸಹಾಯ ಮಾಡಿ ವಿದ್ಯಾರ್ಥಿಯ ಆಸರೆಗೆ ನಿಂತಿದ್ದಾರೆ.
ಸರ್ಕಾರದಿಂದಾಗಲಿ, ಗ್ರಾಮ ಪಂಚಾಯಿತಿಂದಾಗಲಿ ಈ ಬಾಲಕನಿಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಅಂಗವಿಕಲ ವೇತನಕ್ಕೆ ಅರ್ಜಿ ಸಲ್ಲಿಸಿದರೂ ಕ್ಯಾರೇ ಅನ್ನದ ಅಧಿಕಾರಿಗಳು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಆದರೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿರುವ ತಾಯಿ ಭಾಗ್ಯಲಕ್ಷ್ಮೀ, ಮಗ ಶಾಲೆಯಲ್ಲಿ ಎಲ್ಲರಂತೆ ಇರಲು ಮಗನಿಗೆ ಕೃತಕ ಕೈ ಜೋಡಿಸಲು ಸಹಾಯ ಬಯಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=g48gRT7rVeo