‘ನಹಿ ಜ್ಞಾನೇನ ಸದೃಶಂ’ – ಈ ಪ್ರಪಂಚದಲ್ಲಿ ಜ್ಞಾನಕ್ಕೆ ಸಮಾನವಾದ ಪವಿತ್ರವಾದ ವಸ್ತು ಬೇರೊಂದಿಲ್ಲ ಎಂಬ ಭಗವದ್ಗೀತೆಯ ಶ್ಲೋಕದಂತೆ ಇಂದು ಜ್ಞಾನ ತುಂಬುವ ಕೆಲಸವನ್ನು ಮಾಡುತ್ತಿರುವುದು ಶಿಕ್ಷಣ ಸಂಸ್ಥೆಗಳು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನೋ ಮಾತಿಗೆ ಒಂದೊಳ್ಳೆ ಉದಾಹರಣೆ ಶ್ರೀಮತಿ ಗೀತಾಪ್ರಿಯ.
ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟು, ಸವಾಲುಗಳನ್ನು ಎದುರಿಸಿ ಶಿಕ್ಷಣ ತಜ್ಞೆಯಾಗಿ ಬೆಳೆದಿದ್ದಾರೆ. ಕೃಪಾನಿಧಿ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ಸ್ ಸಹ ಸಂಸ್ಥಾಪಕಿಯಾಗಿರುವ ಗೀತಾಪ್ರಿಯ (Geetha Priya) ಅವರದ್ದು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು. ಇದನ್ನೂ ಓದಿ: ಯರವ ಬುಡಕಟ್ಟು ಜನಾಂಗದ ಆಶಾ ಕಿರಣ ಆಶಾಗೆ ನಾರಿ ನಾರಾಯಣಿ ಪ್ರಶಸ್ತಿ
ಗೀತಾಪ್ರಿಯ ಹಾಗೂ ಅವರ ಪತಿ ಡಾ.ಸುರೇಶ್ ನಾಗಪಾಲ್ 1985ರಲ್ಲಿ ಕೃಪಾನಿಧಿ ಶಿಕ್ಷಣ ಸಂಸ್ಥೆಯನ್ನು ಆರಂಭ ಮಾಡಿದಾಗ ಇದ್ದಿದ್ದು ಕೇವಲ 27 ವಿದ್ಯಾರ್ಥಿಗಳು. ಇಂದು ಅದು ದೊಡ್ಡ ಆಲದಮರವಾಗಿ ಬೆಳೆದಿದೆ. ಇದರ ಶ್ರೇಯ ಗೀತಾಪ್ರಿಯ ಅವರಿಗೆ ಸಲ್ಲುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಜ್ಞಾನ ಮತ್ತು ಕೌಶಲ್ಯವನ್ನು ಸಂಪಾದನೆ ಮಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ ಗೀತಾಪ್ರಿಯ.
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರಿಂದ ಹಿಡಿದು ಸಂಸ್ಥೆಯ ಸಹ ಸಂಸ್ಥಾಪಕಿಯಾಗಿ ದಕ್ಷ ಆಡಳಿತ ನಡೆಸುತ್ತಿದ್ದಾರೆ. ಕಲೆಯಲ್ಲೂ ಆಸಕ್ತಿ ಹೊಂದಿರುವ ಇವರು ತಾಯವ್ವ ಚಿತ್ರದಲ್ಲೂ ನಟಿಸಿದ್ದಾರೆ. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಶ್ರೀಮತಿ ಗೀತಾಪ್ರಿಯ ಅವರಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತದೆ. ಇದನ್ನೂ ಓದಿ: ಪ್ರೆಸಿಡೆನ್ಸಿ ಗ್ರೂಪ್ ಆಫ್ ಸ್ಕೂಲ್ಸ್ನ ಶಕ್ತಿ ಡಾ. ನಫೀಸಾ ಅಹಮದ್ಗೆ ನಾರಿ ನಾರಾಯಣಿ ಪ್ರಶಸ್ತಿ
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

