ಮೈಸೂರು: ನಗರದ ರಾಜೇಂದ್ರನಗರ ‘ಎ’ ಬ್ಲಾಕಿನ ಸಾರ್ವಜನಿಕ ಶೌಚಾಲಯದಲ್ಲಿ ಕಳೆದ ಏಳು ವರ್ಷದಿಂದ ವಾಸವಿದ್ದ 13 ಮಂದಿ ಸದಸ್ಯರ ಬಡ ಕುಟುಂಬಕ್ಕೆ ಕೊನೆಗೂ ಅಲ್ಲಿಂದ ಮುಕ್ತಿ ಸಿಕ್ಕಿದೆ. ಶೌಚಾಲಯದಲ್ಲಿ ಬಡ ಕುಟುಂಬ ವಾಸ ಇರುವ ಕುರಿತು ಪಬ್ಲಿಕ್ ಟಿವಿ ಬೆಳಗ್ಗೆ ವಿಶೇಷ ವರದಿ ಮಾಡಿತ್ತು.
ವರದಿ ಬಿತ್ತರ ಬೆನ್ನಲ್ಲೇ ಶೌಚಾಲಯದಿಂದ ಮುಕ್ತಿ ನೀಡಿ ಸೂರು ಕಲ್ಪಿಸಲು ವ್ಯವಸ್ಥೆ ಆಗಿದೆ. ಸ್ಥಳೀಯ ಪಾಲಿಕೆ ಸದಸ್ಯ ಪ್ರದೀಪ್ ಚಂದ್ರ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕುಟುಂಬಕ್ಕೆ ಪರ್ಯಾಯ ಸ್ಥಳ ನಿಯೋಜನೆ ಮಾಡುವ ಭರವಸೆ ನೀಡಿದ್ದಾರೆ. ಅಲ್ಲದೇ 13 ಜನರಿರುವ ಬಿಂದು ಕುಟುಂಬಸ್ಥರನ್ನು ಸರ್ಕಾರ ನಿರ್ಮಿಸಿರುವ ಮನೆಗಳ ಬಳಿ ಕರೆದೊಯ್ದು ಮನೆಗಳನ್ನು ತೋರಿಸಿದ್ದಾರೆ.
ಸದ್ಯ ಸರ್ಕಾರ ಮನೆ ನಿರ್ಮಿಸುತ್ತಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಎರಡು ಮನೆಗಳಲ್ಲಿ ಬಡಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ದಿನಗಳ ಗುಂಪು ಮನೆ ಅಥವಾ ಆಶ್ರಯ ಮನೆ ಯೋಜನೆಯಲ್ಲಿ ಕುಟುಂಬಗಳಿಗೆ ಮನೆ ವಿತರಣೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಕಳೆದ 7 ವರ್ಷಗಳಿಂದ ಹಿಂದೆ ಕೃಷ್ಣಮ್ಮ ಎಂಬವರ ಕುಟುಂಬ ಗುಡಿಸಲಿನಲ್ಲಿ ವಾಸ ಮಾಡುತ್ತಿತ್ತು. ಗುಡಿಸಲು ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಲು ಮನೆ ಖಾಲಿ ಮಾಡಿಸಿ ಬೇರೆ ನಿವೇಶನ ಕೊಡುತ್ತೇವೆ ಎಂದು ಹೇಳಿದ್ದರು. ಪರಿಣಾಮ ಕಳೆದ 7 ವರ್ಷಗಳಿಂದ ಇಡೀ ಕುಟುಂಬ ಸಾರ್ವಜನಿಕ ಶೌಚಾಲಯದಲ್ಲೇ ವಾಸಿಸುತ್ತಿದ್ದರು. ಆದರೆ ಈಗ ಆ ಸ್ಥಳವನ್ನು ಖಾಲಿ ಮಾಡಲು ಅಧಿಕಾರಿಗಳು ಹೇಳಿದ್ದರು. ಈ ಕುರಿತ ವಿಶೇಷ ವರದಿಯನ್ನು ಪಬ್ಲಿಕ್ ಟಿವಿ ಪ್ರವಾಸ ಮಾಡಿ ಬಡಕುಟುಂಬಕ್ಕೆ ಆಶ್ರಯ ಕಲ್ಪಿಸಿಕೊಡಲು ಮನವಿ ಮಾಡಿತ್ತು.