ಚಿಕ್ಕಮಗಳೂರು: ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಕಳಸದ (Kalasa) ಬಿಳಿಗಲ್ ಗ್ರಾಮದ ಸುದ್ದಿ `ಪಬ್ಲಿಕ್ ಟಿವಿ’ಯಲ್ಲಿ (Public TV) ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹಳ್ಳಿಗರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಬಿಳಿಗಲ್ ಗ್ರಾಮಸ್ಥರು ಕಳೆದ 50 ವರ್ಷಗಳಿಂದ ಇಲ್ಲಿ ವಾಸವಿದ್ದರು. ಕುದುರೆಮುಖ ಕಂಪನಿ ಪ್ರಾರಂಭಗೊಂಡಾಗ ಲಕ್ಯಾ, ಕಾರಮಣ್ಣು ಗ್ರಾಮಗಳಿಂದ ಇವರನ್ನು ಒಕ್ಕಲೆಬ್ಬಿಸಿ ಬಿಳಗಲ್ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಆದರೆ, 50 ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದೆ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ. ಈ ಸುದ್ದಿ `ಪಬ್ಲಿಕ್ ಟಿವಿ’ಯಲ್ಲಿ ಪ್ರಸಾರವಾಗಿತ್ತು. ಇದನ್ನೂ ಓದಿ: ನೀರು ಶುದ್ಧೀಕರಣ ಘಟಕಕ್ಕೆ ಸಚಿವ ಬಿ.ನಾಗೇಂದ್ರ ಭೇಟಿ, ಪರಿಶೀಲನೆ
ಪ್ರಸಾರವಾದ ಬೆನ್ನಲ್ಲೇ ಸ್ಥಳಕ್ಕೆ ಕಳಸ ತಹಶೀಲ್ದಾರ್ ಮಂಜುನಾಥ್, ಕಂದಾಯ ಇಲಾಖೆಯ ಅಜ್ಜೇಗೌಡ, ಆರ್.ಐ ಪ್ರದೀಪ್ ಕುಮಾರ್, ಪಿಡಿಓ ಅರುಣ್, ಮೂಡಿಗೆರೆ ಶಾಸಕರ ಸಹಾಯಕ ಶಂಶುದ್ದಿನ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಉದಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ, ಕಳೆದ ವರ್ಷ ಕರಡಿ ದಾಳಿಯಿಂದ ಕಾಲು ಕಳೆದುಕೊಂಡ ಬೆಳ್ಳಪ್ಪನವರ ಮನೆಗೆ ಭೇಟಿ ನೀಡಿ ಮುಂದಿನ ತಿಂಗಳಿನಿಂದ ಅಂಗವಿಕಲರ ಮಾಸಾಶನ ಬರುವಂತೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ರಸ್ತೆ ಡಾಂಬರೀಕರಣ, ದೂರವಾಣಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ, ತಡೆಗೋಡೆ ಇಲ್ಲದ ಸೇತುವೆಗಳಿಗೆ ತಡೆಗೋಡೆ ನಿರ್ಮಿಸಿಕೊಡುವಂತೆ ಜನರು ಮನವಿ ಮಾಡಿದ್ದಾರೆ. ಫಾರಂ 50, 53, 57ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಜಮೀನು ಮಂಜೂರು ಮಾಡಿ, ಕಾಲು ಸಂಕಗಳನ್ನ ನಿರ್ಮಾಣ ಮಾಡಿ ತೂಗು ಸೇತುವೆಯ ದುರಸ್ಥಿ ಹಾಗೂ ನಿರ್ವಹಣೆಯನ್ನು ತುರ್ತಾಗಿ ಕಲ್ಪಿಸಿ ಕೊಡಬೇಕಾಗಿ ಮನವಿ ಮಾಡಿದ್ದಾರೆ.
ಅಧಿಕಾರಿಗಳನ್ನು ಗ್ರಾಮಕ್ಕೆ ಬಂದು ಜನರ ಸಮಸ್ಯೆಯನ್ನು ಆಲಿಸುವಂತೆ ಎಚ್ಚರಿಸಿದ `ಪಬ್ಲಿಕ್ ಟಿವಿ’ಗೆ ಗ್ರಾಮದ ಜನ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೆಡಿಕಲ್ ಕಾಲೇಜ್ ಸ್ಥಳಾಂತರಕ್ಕೆ ಆಕ್ರೋಶ – ರಾಮನಗರ ಬಂದ್ಗೆ ಕರೆ
Web Stories