ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತವರು ಮೈಸೂರಿನಲ್ಲಿ ಅಂಗನವಾಡಿಯ (Anganawadi) ದುಸ್ಥಿತಿಯ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಬಿತ್ತರಿಸಿದ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಶೀಘ್ರವೇ ಸ್ವಂತ ಅಂಗನವಾಡಿ ಕಟ್ಟಡದ ಭರವಸೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ವರದಿಗೆ ಪ್ರತಿಕ್ರಿಯಿಸಿದ ಅವರು, ಮೈಸೂರಿನ ಅಂಗನಾವಾಡಿ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. 15 ದಿನದೊಳಗೆ ಬಾಡಿಗೆ ಕಟ್ಟಡಕ್ಕೆ ಶಿಫ್ಟ್ ಮಾಡಿಸುತ್ತೇನೆ. ಆದಷ್ಟು ಬೇಗ ಸರ್ಕಾರ ಸ್ವಂತ ಜಾಗ ಖರೀದಿಸುತ್ತೆ. ಅಲ್ಲೇ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುವುದಾಗಿ ಸಚಿವೆ ಭರವಸೆ ನೀಡಿದ್ದಾರೆ.
ದುಸ್ಥಿತಿ ಏನು..?: ಸಿಎಂ ತವರಲ್ಲಿ ತಲೆ ತಗ್ಗಿಸುವಂತಹ ಸ್ಥಿತಿಯಲ್ಲಿ ಅಂಗನವಾಡಿ ಕೇಂದ್ರ ಇದೆ. ಮುರಿದ ಗುಡಿಸಲಿನಲ್ಲಿ ಅಂಗನವಾಡಿಗೆ ಬರುವ ಮಕ್ಕಳು ಆಟವಾಡಬೇಕಿದೆ. ಮೈಸೂರಿನ ಬನ್ನಿಮಂಟಪದ ಎಲ್ಲಮ್ಮ ಬಡಾವಣೆಯ ಅಂಗನವಾಡಿಯ ಶೋಚನಿಯ ಸ್ಥಿತಿ ಇದು. ಮಣ್ಣಿನಲ್ಲೆ ಕುಳಿತು ಮಕ್ಕಳು ಊಟ ಮಾಡಬೇಕಿದೆ. ಗುಡಿಸಲ ನೆಲವನ್ನು ಇಲಿ, ಹೆಗ್ಗಣಗಳು ಕೊರೆದು ಹಾಕಿವೆ. 60 ಮಕ್ಕಳ ಸಂಖ್ಯೆ ಬಲ ಹೊಂದಿರುವ ಅಂಗನವಾಡಿ ಕೇಂದ್ರದಲ್ಲಿ ಪ್ರತಿ ನಿತ್ಯವೂ ಸುಮಾರು 25 ಮಕ್ಕಳು ಅಂಗನವಾಡಿಗೆ ಬರುತ್ತಿದ್ದಾರೆ. ಮಣ್ಣಿನಲ್ಲೇ ಕುಳಿತು ಆಟವಾಡಿ, ಮದ್ಯಾಹ್ನದ ಊಟ ಸೇವಿಸಿ ಹೋಗುತ್ತಿದ್ದಾರೆ ಎಂದು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು.
ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸ್ಥಳೀಯರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಅಂಗನವಾಡಿಗೆ ಜಾಗ ಮೀಸಲಿರಿಸಿವದ್ದೇವೆ. ಆದರು ಅದನ್ನು ಮಾಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಪ್ರಸಂಗ ನಡೆಯಿತು.