ಬೆಂಗಳೂರು: ಜನಮೆಚ್ಚಿದ ಸುದ್ದಿ ವಾಹಿನಿ ಪಬ್ಲಿಕ್ ಟಿವಿಗೆ ಸಾರ್ಥಕ 10 ವರ್ಷಗಳ ಸಂಭ್ರಮ. ಈ ಸಂತಸಕ್ಕೆ ಕಾರಣವಾದ ನಾಡಿನ ಜನತೆಗೆ ಧನ್ಯವಾದ ಹೇಳಲು ನಿಮ್ಮ ಪಬ್ಲಿಕ್ ಟಿವಿಯ ತೇರು `ದಶ’ರಥ ನಿಮ್ಮ ಮನೆ ಬಾಗಿಲಿಗೆ ಬರಲಿದೆ.
ಪಬ್ಲಿಕ್ ಟಿವಿ ಪ್ರಚಾರ ರಥಕ್ಕೆ ಇಂದು ಚಾಲನೆ ನೀಡಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ಹಸಿರು ನಿಶಾನೆ ತೋರುವ ಮೂಲಕ ರಥಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾವು ಸದಾ ಚಿರಋಣಿ
ಈ ರಥವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಿ ಪಬ್ಲಿಕ್ ಟಿವಿಯ ಸಾಧನೆ ಕುರಿತು ಪ್ರಚಾರ ಮಾಡಲಿದೆ. ಪಬ್ಲಿಕ್ ಟಿವಿಯ ಜನಪ್ರಿಯತೆ, ಜನಪರ ಕಾರ್ಯಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲಿದೆ.
ರಥಕ್ಕೆ ಚಾಲನೆ ನೀಡಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕನ್ನಡದ ಪಬ್ಲಿಕ್ ಟಿವಿ ರಥವು ಉದ್ಘಾಟನೆಗೊಂಡಿದ್ದು, ರಾಜ್ಯದ ಉದ್ದಗಲಕ್ಕೂ ಸಂಚರಿಸಲಿದೆ. ಪಬ್ಲಿಕ್ ಟಿವಿ ಸಾಧನೆಗಳು ಹಾಗೂ ಹೆಚ್.ಆರ್.ರಂಗನಾಥ್ ಅವರು ಹಂಚಿಕೊಂಡಿರುವ ವಿಷಯಗಳನ್ನು ಜನತೆಗೆ ತಿಳಿಸುವ ಶುಭ ಸಂದರ್ಭ ಇದಾಗಿದೆ. ರಥ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿ ಯಶಸ್ವಿಯಾಗಿ ಮರಳಲಿ. ರಂಗನಾಥ್ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಲಿ ಎಂದು ಹಾರೈಸಿದರು. ಇದನ್ನೂ ಓದಿ: ಸಿದ್ದಗಂಗಾ ಮಠದಲ್ಲಿ ಪಬ್ಲಿಕ್ ಟಿವಿ ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ
ಸಚಿವ ಆರ್.ಅಶೋಕ್ ಮಾತನಾಡಿ, ಪಬ್ಲಿಕ್ ಟಿವಿಯನ್ನು 10 ವರ್ಷದಿಂದ ಬಲ್ಲೆ. ಆದರೆ ರಂಗಣ್ಣ ಅವರನ್ನು 25 ವರ್ಷದಿಂದ ಬಲ್ಲೆ. ರಂಗಣ್ಣ ಮತ್ತು ನಾವು ಸ್ನೇಹಿತರು. ಪಬ್ಲಿಕ್ ಟಿವಿ 10 ವರ್ಷ ಪೂರೈಸಿ ವೈಭವದ ಕಾಲದಲ್ಲಿದೆ. ಆರಂಭದಲ್ಲಿ ಕಷ್ಟದ ಕಾಲ ಎದುರಿಸಿತ್ತು. ಈಗ ಪ್ರಖ್ಯಾತಿಯ ಕಾಲದಲ್ಲಿದೆ. ಮೊದಲು ಜನರ ಹತ್ತಿರ ಪಬ್ಲಿಕ್ ಟಿವಿ ಹೋಗಿತ್ತು. ಈಗ ಜನರೇ ಪಬ್ಲಿಕ್ ಟಿವಿ ಹತ್ತಿರ ಬಂದಿದ್ದಾರೆ. ದಶಕ ಪೂರೈಸಿರುವ ಪಬ್ಲಿಕ್ ಟಿವಿ ನೂರಾರು ವರ್ಷ ಜನರ ವಾಹಿನಿಯಾಗಿ ಯಶಸ್ಸುಗಳಿಸಲಿ ಎಂದು ಹಾರೈಸುತ್ತೇನೆ ಎಂದರು.
ಈ ವೇಳೆ ಬಿಜೆಪಿ ರಾಜ್ಯ ಯುವ ಮೋರ್ಚ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರೇವಾ ವಿವಿ ಕುಲಪತಿ ಡಾ. ಪಿ. ಶ್ಯಾಮರಾಜು, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಇತರರು ಉಪಸ್ಥಿತರಿದ್ದರು.