ಮೈಸೂರು: ಸಿದ್ಧಾಂತದ ಹೆಸರಿನಲ್ಲಿ ಕ್ರಾಂತಿ ಮಾಡ್ತೀವಿ ಅಂತ ಬೀದಿಗೆ ಇಳಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗ್ತಿದೆ. ಆದರೆ, ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸದ್ದಿಲ್ಲದೆ ಬಡವರ ಹಸಿವು ನೀಗಿಸೋ ಕೆಲಸ ಮಾಡ್ತಿದ್ದಾರೆ. ಅನ್ನ ಧರ್ಮದ ಹೆಸರಿನಲ್ಲಿ ದೊಡ್ಡದೊಂದು ತಂಡವನ್ನೇ ಕಟ್ಟುವ ಮೂಲಕ ಪಬ್ಲಿಕ್ ಹೀರೋಗಳು ಎನಿಸಿಕೊಂಡಿದ್ದಾರೆ.
ಆಹಾರವಿಲ್ಲದೆ ಅದೆಷ್ಟೋ ಜನ ಹಸಿದೇ ಮಲಗುತ್ತಾರೆ. ಇಂತವರ ಹಸಿವು ನೀಗಿಸೋ ಕೆಲಸವನ್ನು ಸ್ನಾತಕೋತ್ತರ ಮತ್ತು ಪಿಎಚ್ಡಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿನಿಯರು ಮಾಡುತ್ತಿದ್ದಾರೆ. ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಪಿಎಚ್ಡಿ ಮಾಡುತ್ತಿರುವ ಸುಷ್ಮಾ ಹಾಗೂ ಮಹಾಜನ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಹರ್ಷಿತಾ ಅನ್ನಧರ್ಮವೇ ಮಿಗಿಲು ಎನ್ನುತ್ತಿದ್ದಾರೆ.
ದೆಹಲಿ ಮೂಲದ ರಾಬಿನ್ ಹುಡ್ ಆರ್ಮಿ ಎಂಬ ಎನ್ಜಿಓ ಸಂಘಟನೆಯನ್ನು ಈ ವಿದ್ಯಾರ್ಥಿನಿಯರು ಮೈಸೂರಿನಲ್ಲಿ ಬೆಳೆಸುತ್ತಿದ್ದಾರೆ. ಮೈಸೂರು ನಗರದಲ್ಲಿನ ಅನೇಕ ಹೋಟೆಲ್, ಕಲ್ಯಾಣಮಂಟಪಗಳಿಂದ ಪ್ರತಿ ರಾತ್ರಿ ಆಹಾರ ಸಂಗ್ರಹಿಸಿ ಬಡವರು, ನಿರ್ಗತಿಕರ ಹಸಿವು ನೀಗಿಸುತ್ತಿದ್ದಾರೆ.
ವಾಟ್ಸಪ್ ಗ್ರೂಪ್ ರಚಿಸಿಕೊಂಡು ಆರಂಭದಲ್ಲಿ ಇವರಿಬ್ಬರೇ ಆಹಾರ ಸಂಗ್ರಹಿಸಿ ಜನರಿಗೆ ನೀಡ್ತಿದ್ದರು. ಆದರೆ ಇದೀಗ 50 ಜನ ಸ್ವಯಂಸೇವಕರಿದ್ದಾರೆ. ವಾಟ್ಸಪ್ ಗ್ರೂಪಲ್ಲಿ ತಮ್ಮಲ್ಲಿ ಉಳಿದ ಆಹಾರದ ಬಗ್ಗೆ ಹೋಟೆಲ್ ಮಾಲೀಕರು, ಕಲ್ಯಾಣಮಂಟಪದವರು ಗ್ರೂಪ್ ಸದಸ್ಯರಿಗೆ ಮಾಹಿತಿ ನೀಡ್ತಾರೆ. ಆಗ, ಆಹಾರವನ್ನು ಸಂಗ್ರಹಿಸಿ ವಿತರಿಸುವ ಕಾರ್ಯ ನಡೆಯುತ್ತೆ ಎಂದು ರಾಬಿನ್ ಹುಡ್ ಆರ್ಮಿ ಸದಸ್ಯೆ ಹರ್ಷಿತಾ ಹೇಳುತ್ತಾರೆ.
ಒಟ್ಟಿನಲ್ಲಿ ನಿರ್ಗತಿಕರು, ಬಡವರ ಹಸಿವು ನೀಗಿಸೋ ಕೆಲಸವನ್ನು ರಾಬಿನ್ ಹುಡ್ ಆರ್ಮಿ ಹೀಗೆ ಮುಂದುವರಿಸಲಿ ಎಂಬುದೇ ಎಲ್ಲರ ಆಶಯವಾಗಿದೆ.