ಚಿಕ್ಕಬಳ್ಳಾಪುರ: ಸರ್ಕಾರಿ ನೌಕರರು ನಿವೃತ್ತಿಯಾದ್ರೆ ಬಹುತೇಕರು ನೆಮ್ಮದಿಯ ಜೀವನ ನಡೆಸ್ತಾರೆ. ಆದ್ರೆ, ಈ ನಮ್ಮ ಪಬ್ಲಿಕ್ ಹೀರೋ ಸುಬ್ಬಕೃಷ್ಣ ಮಾತ್ರ ಬಾಗೇಪಲ್ಲಿ ಪಟ್ಟಣದ ಹಲವು ಸ್ಮಶಾನಗಳನ್ನ ಶುಚಿಗೊಳಿಸ್ತಿದ್ದಾರೆ.
ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿಯ ಸುಬ್ಬಕೃಷ್ಣ, ಸದ್ಯ ಬಾಗೇಪಲ್ಲಿ ನಗರದಲ್ಲಿ ವಾಸವಾಗಿದ್ದಾರೆ. ಕಂದಾಯ ನೀರಿಕ್ಷಕರಾಗಿ ನಿವೃತ್ತರಾಗಿರೋ ಇವರು ಕಳೆದ 2 ವರ್ಷಗಳಿಂದ ಬಾಗೇಪಲ್ಲಿ ಪಟ್ಟಣದ ಸ್ಮಶಾನದ ಸ್ವಚ್ಛತೆ ಹಾಗೂ ನಿರ್ವಹಣೆ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಪ್ರತಿದಿನ ಬೆಳಗ್ಗೆ ಹತ್ತೂವರೆ ಗಂಟೆಗೆ ಟಿವಿಎಸ್ನಲ್ಲಿ ಹೊರಟು 2 ಗಂಟೆಗಳ ಕಾಲ ನಾಲ್ಕು ಸ್ಮಶಾನಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸ್ತಾರೆ.
ಒಮ್ಮೆ ಸ್ನೇಹಿತರೊಬ್ಬರ ಅಂತ್ಯಕ್ರಿಯೆಗೆ ಹೋಗಿದ್ದಾಗ ಸ್ಮಶಾನದಲ್ಲಿ ಹೆಜ್ಜೆ ಇಡಲೂ ಆಗದಂತ ಪರಿಸ್ಥಿತಿ ಇತ್ತಂತೆ. ಅವತ್ತೇ ನಿರ್ಧರಿಸಿ ಬೆಳಗ್ಗೆ ವಾಕಿಂಗ್ಗೆ ಬದಲು ಸ್ಮಶಾನ ಸ್ವಚ್ಛತೆಗೆ ನಿರ್ಧರಿಸಿ ಈಗ ಅದೇ ಅಭ್ಯಾಸವಾಗಿದೆ. ಸ್ವಚ್ಛತಾಕಾರ್ಯದ ವೇಳೆ ಮುಳ್ಳು ಚುಚ್ಚಿ ರಕ್ತ ಸೋರಿಸಿಕೊಂಡು ಬಂದದ್ದು ಇದೆ.
ಸಮುದಾಯದಲ್ಲಿ ಬ್ರಾಹ್ಮಣರಾಗಿರೋ ಕಾರಣ ಹಲವರು ವಿರೋಧಿಸಿ ಟೀಕೆ ಮಾಡಿದ್ದರಂತೆ. ಆದ್ರೂ, ತಲೆಕೆಡಿಸಿಕೊಳ್ಳದೆ ಸುಬ್ಬಕೃಷ್ಣ ಅವ್ರು ಮಾತ್ರ ತಮ್ಮ ಸಮಾಜಮುಖಿ ಕಾರ್ಯ ಮುಂದುವರಿಸಿದ್ದಾರೆ.