ಚಿತ್ರದುರ್ಗ: ರಣಭಯಂಕರ ಬರಕ್ಕೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ತಾಪಕ್ಕೆ ಧರೆಯೇ ಬೆಂಕಿಯುಂಡೆಂಯಂತಾಗಿದೆ. ಇದಕ್ಕೆ ಕಾರಣವೇನು? ನಮ್ಮ ಸ್ವಯಂಕೃತ ಅಪರಾಧವೇ. ಇದನ್ನ ಮನಗಂಡ ಚಿತ್ರದುರ್ಗದ ಪರಿಸರ ಪ್ರೇಮಿ ಸಿದ್ದರಾಜು ಈಗ ಗಿಡ ಬೆಳೆಸೋಕೆ ಟೊಂಕ ಕಟ್ಟಿದ್ದಾರೆ.
ರಾಜ್ಯದಲ್ಲಿ ಹಿಂದೆಂದೂ ಕಾಣದಂತ ಬರ ಆವರಿಸಿದೆ, ಮಳೆ ಕೈಕೊಟ್ಟಿದೆ. ಎಲ್ಲಿ ನೋಡಿದ್ರೂ ಬಟಾಬಯಲೇ ಕಾಣ್ತಿದೆ. ಇದಕ್ಕೆ ಕಾರಣ ಮಾನವರಾದ ನಮ್ಮ ಸ್ವಯಂಕೃತ ಅಪರಾಧವೇ. ಇದನ್ನೆಲ್ಲಾ ಮನಗಂಡ ಚಿತ್ರದುರ್ಗದ ಬುರುಜನಹಳ್ಳಿಯ ಸಿದ್ದರಾಜು ಜೋಗಿ ಈಗ ಪರಿಸರ ರಕ್ಷಣೆಗೆ ನಿಂತಿದ್ದಾರೆ. ಎಲ್ಲರ ಅನುಮತಿ ಪಡೆದು ತಮ್ಮ ಬಡಾವಣೆಯ ಪ್ರತಿ ಮನೆ ಎದುರು, ರಸ್ತೆ ಬದಿಯಲ್ಲಿ ಸ್ನೇಹಿತರೊಂದಿಗೆ ಗಿಡ ಬೆಳೆಸ್ತಿದ್ದಾರೆ.
ಎಂಎ, ಬಿ.ಎಡ್ ಓದಿರೋ ಸಿದ್ದರಾಜು ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಗಿಡ ನೆಡೋದನ್ನ ಪ್ರವೃತ್ತಿಯಾಗಿಸಿಕೊಂಡು ಪರಿಸರ ಜಾಗೃತಿ ಮೂಡಿಸ್ತಿದ್ದಾರೆ. ಈ ವರ್ಷಾಂತ್ಯಕ್ಕೆ 10 ಸಾವಿರ ಗಿಡಗಳನ್ನ ನೆಟ್ಟು ಚಿತ್ರದುರ್ಗವನ್ನ ಹಸಿರು ದುರ್ಗವನ್ನಾಗಿಸುವ ಪಣ ತೊಟ್ಟಿದ್ದಾರೆ.
ಹಸಿರೇ ಉಸಿರು ಅಂತ ಈಗಾಗಲೇ ವಿವಿಧ ಜಾತಿಯ 600ಕ್ಕೂ ಹೆಚ್ಚು ಗಿಡಗಳನ್ನ ನೆಟ್ಟಿರೋ ಸಿದ್ದರಾಜು ಮತ್ತವರ ಬಳಗದ ಕೆಲಸವನ್ನ ಗ್ರಾಮಸ್ಥರು ಮುಕ್ತವಾಗಿ ಶ್ಲಾಘಿಸ್ತಾರೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಹೀಗೆ ಒಂದೊಂದು ಗಿಡ ನೆಟ್ಟರೆ ಖಂಡಿತ ಇಂಥ ಭೀಕರ ಬರ, ರಣಭಯಂಕರ ಬಿಸಿಲನ್ನ ತಡೆಯಬಹುದು.