ಕೊಪ್ಪಳ: ದಿನ ನಿತ್ಯ ಸಿಟಿ ಪೆಟ್ರೋಲಿಂಗ್ ಹೊಗ್ತಿದ್ದ ಪೊಲೀಸರಿಗೆ ಸರ್ಕಾರಿ ಶಾಲೆಯೊಂದು ಕಣ್ಣಿಗೆ ಕಂಡಿತ್ತು. ಆ ಒಂದು ಸರ್ಕಾರಿ ಶಾಲೆಯನ್ನು ನೋಡಿದ ಪೊಲೀಸರ ಮನ ಒಂದು ಕ್ಷಣ ಮಂಜಿನ ಹನಿಯಂತೆ ಕರಗಿ ನಿರಾಯಿತು. ಇದನ್ನೇ ಛಲವಾಗಿ ತೆಗೆದುಕೊಂಡ ಪೊಲೀಸರು ಆ ಶಾಲೆಯನ್ನು ದತ್ತು ಪಡೆದುಕೊಂಡು ಈವಾಗ ಮಾದರಿ ಶಾಲೆಯನ್ನಾಗಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸರ್ಕಾರ ಮಕ್ಕಳನ್ನು ಶಾಲೆಗೆ ಕರೆತರಲು ಅದೆಷ್ಟೋ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಇನ್ನೂ ಕೆಲವು ಕಡೆ ಮಕ್ಕಳಿಗೆ ಪಾಠ ಕೇಳಲು ಸರಿಯಾದ ವಾತಾವರಣ ಇಲ್ಲ. ಇದನ್ನು ಮನಗಂಡ ಕೊಪ್ಪಳದ ಒಂದು ಸರ್ಕಾರಿ ಶಾಲೆಯನ್ನು ಪೊಲೀಸರು ದತ್ತಕ್ಕೆ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬರುವಂತೆ ಮಾಡಿದ್ದಾರೆ.
ಗಂಗಾವತಿ ನಗರದ ಎಪಿಎಂಸಿ ಗಂಜ್ ಹಮಾಲರ ಕಾರ್ಮಿಕರ ಏರಿದಲ್ಲಿರುವ ಸರಕಾರಿ ಪ್ರೌಢಶಾಲೆಯನ್ನು ಗಂಗಾವತಿ ಉಪ ವಿಭಾಗ ಡಿವೈಎಸ್ಪಿ ಡಾ.ಚಂದ್ರಶೇಖರ ನೇತೃತ್ವದಲ್ಲಿ ದತ್ತು ಪಡೆದು ಕೊಂಡು ಇದೀಗ ಈ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ. ಇಡೀ ಶಾಲೆಗೆ ಸುಣ್ಣ ಬಣ್ಣ ಹಚ್ಚಿ ಶಾಲೆಯ ಗೋಡೆಗಳ ಮೇಲೆ ಸಾಹಿತ್ಯ ವಿಜ್ಞಾನ, ಕಲೆ ಜ್ಞಾನಪೀಠ ಪುರಸ್ಕೃತರು ನೊಬೆಲ್ ಪ್ರಶಸ್ತಿ ಪಡೆದ ದೇಶದ ಪ್ರಧಾನಿ, ರಾಜ್ಯದ ಸಿಎಂ ಸೇರಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಡಿವೈಎಸ್ಪಿ ಡಾ.ಚಂದ್ರಶೇಖರ್ ಬರೆಸಿದ್ದಾರೆ.
ಬ್ಲ್ಯಾಕ್ ಆಂಡ್ ವೈಟ್ ಇದ್ದ ಶಾಲೆ ಕಲರ್ ಫುಲ್ ಆಗಿ ಬದಲಾಗಿದೆ. ಸ್ವತಃ ಡಿವೈಎಸ್ಪಿ ಚಂದ್ರಶೇಖರ ಮುಂದೆ ನಿಂತು ಎಲ್ಲಾ ಕೆಲಸಗಳನ್ನು ಜವಬ್ದಾರಿಯುತವಾಗಿ ಜೋತೆಗೆ ಅಚ್ಚುಕಟ್ಟಾಗಿ ಮಾಡಿಸಿದ್ದಾರೆ. ಇನ್ನೂ ಅದಿಷ್ಟೇ ಅಲ್ಲದೆ ಶಾಲೆಯಲ್ಲಿ ಗ್ರಂಥಾಲಯ ಸೇರಿ ಮೂಲ ಸೌಕರ್ಯವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದ್ದಾರೆ.
ಗಂಗಾವತಿ ಪೊಲೀಸರ ಈ ಕೆಲಸವನ್ನು ಮಾಧ್ಯಮಗಳ ಮುಖಾಂತರ ನೋಡಿದ ಶಿಕ್ಷಣ ಸಚಿವರು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಡಿವೈಎಸ್ಪಿ ಜೊತೆಗೆ ಈ ಹಿಂದೆ ಗಂಗಾವತಿ ನಗರ ಠಾಣೆಯಲ್ಲಿ ಪಿಐ ಆಗಿದ್ದ ಉದಯರವಿ ಮತ್ತು ಸುರೇಶ್ ತಳವಾರ್ ತಮ್ಮ ಒಂದು ತಿಂಗಳ ವೇತನದಲ್ಲಿ ಗ್ರಂಥಾಲಯ ಹಾಗೂ ಇದಕ್ಕೆ ಬೇಕಾಗುವ ಪುಸ್ತಕಗಳನ್ನು ಖರೀದಿ ಮಾಡಲು ಶಾಲೆಯವರಿಗೆ ಹಣ ನೀಡಿ ಸಹಾಯ ಮಾಡಿದ್ದರು. ಗ್ರಾಮೀಣ ಠಾಣೆಯ ಪಿ.ಎಸ್.ಐ ದೊಡ್ಡಪ್ಪನವರು ಸಹ ಡಿವೈಎಸ್ಪಿಯವರ ಕೆಲಸಕ್ಕೆ ಸಾಥ್ ನೀಡಿದ್ದಾರೆ. ವಿದ್ಯಾರ್ಥಿಗಳು ಕೂಡ ತುಂಬಾ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಹಾಳು ಬಿದಿದ್ದ ಸರ್ಕಾರಿ ಶಾಲೆಯನ್ನು ದತ್ತು ತಗೆದುಕೊಂಡು ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ತಯಾರು ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಶಾಲೆಗೆ ಬರುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಯಲು ಪೂರಕವಾದ ಮತ್ತು ನೈಸರ್ಗಿಕವಾದ ವಾತಾವರಣ ಸೃಷ್ಟಿ ಮಾಡಿರುವ ಗಂಗಾವತಿ ಪೊಲೀಸ್ ಅಧಿಕಾರಿಗಳಿಗೆ ಸಾರ್ವಜನಿಕರು ಸೆಲ್ಯೂಟ್ ಹೊಡೆಯುತ್ತಿದ್ದಾರೆ.