ಬೆಂಗಳೂರು: ಸ್ಮಶಾನ ಅಂದರೆ ಜನ ಭೀತಿಗೊಳ್ಳುತ್ತಾರೆ. ಆದರೆ ನೆಲಮಂಗಲದ ಮಾದನಾಯಕನಹಳ್ಳಿಯ ಚೌಡಪ್ಪ ಅವರು ಹೆಂಡತಿ – ಮಗನನ್ನ ಕಳೆದುಕೊಂಡ ನೋವಿನಲ್ಲಿ ಇವತ್ತಿಗೂ ಸ್ಮಶಾನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇವರೇ ನಮ್ಮ ಪಬ್ಲಿಕ್ ಹೀರೋ ಆಗಿದ್ದಾರೆ.
ಯಾವ ರಾಜಕಾರಣಿಗೂ ಕಡಿಮೆ ಇಲ್ಲದಂತೆ ವೈಟ್ ಅಂಡ್ ವೈಟ್ ಡ್ರೆಸ್ ಮಾಡಿಕೊಂಡಿರುವವರು ಚೌಡಪ್ಪ. ಇವರು ಮಾದನಾಯಕನಹಳ್ಳಿ ನಿವಾಸಿಯಾಗಿದ್ದು, ಸ್ಮಶಾನದಲ್ಲಿ ನೆಲೆಸಿದ್ದಾರೆ. ಮನೆ ಮಠ ಇದ್ದರೂ ಸ್ಮಶಾನದಲ್ಲೇ ಬದುಕುತ್ತಿದ್ದಾರೆ. ಸುಮಾರು 10 ವರ್ಷದ ಹಿಂದೆ ಅನಾರೋಗ್ಯದಿಂದ ಹೆಂಡತಿ ಮತ್ತು ಮಗು ಮೃತಪಟ್ಟಿದ್ದರು. ಆದ್ದರಿಂದ ಅಂದಿನಿಂದ ಆ ಎರಡು ಗೋರಿಗಳ ಪಕ್ಕದಲ್ಲೇ ಗುಡಿಸಲು ನಿರ್ಮಿಸಿಕೊಂಡಿದ್ದಾರೆ.
70 ವರ್ಷದ ಚೌಡಪ್ಪ ಗ್ರಾಮದಲ್ಲಿ ಮನೆಯಿದ್ದರೂ ಅಲ್ಲಿಗೆ ಹೋಗದೆ, ಹೆಂಡತಿ -ಮಗನ ನೆನಪಿನಲ್ಲಿ ಸ್ಮಶಾನದಲ್ಲೇ ನೆಲೆಸಿದ್ದಾರೆ. ಜೊತೆಗೆ, ನಾನಾ ಬಗೆಯ ಮರ-ಗಿಡ, ಸೊಪ್ಪು-ತರಕಾರಿ, ಹೂ ಬೆಳೆದು ಸ್ಮಶಾನದ ಬಗೆಗಿನ ಮೂಢನಂಬಿಕೆಯನ್ನೂ ಹೋಗಲಾಡಿಸಿದ್ದಾರೆ. ಗ್ರಾಮದಲ್ಲಿ ಯಾರೇ ಸಾವನ್ನಪ್ಪಿದ್ದರೂ ಅವರಿಗೆ ಇವರೇ ಗುಂಡಿ ತೋಡಿ, ಸಮಾಧಿ ನಿರ್ಮಿಸುತ್ತಾರೆ ಎಂದು ಸ್ಥಳಿಯ ಮಂಜುನಾಥ್ ಹೇಳಿದ್ದಾರೆ.
ವೀರಬಾಹುವಿನಂತೆ ಬದುಕುತ್ತಿರುವ ಚೌಡಪ್ಪ ಅವರು ತಮ್ಮ ಗ್ರಾಮದಲ್ಲಿ ನೈರ್ಮಲ್ಯಕ್ಕೆ ಆದ್ಯತೆಯನ್ನೂ ನೀಡಿದ್ದಾರೆ.
https://www.youtube.com/watch?v=W6aDOTM480M