ಬಾಗಲಕೋಟೆ: ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕುಟುಂಬಸ್ಥರು ಶವವನ್ನು ಆಸ್ಪತ್ರೆಯ ಮುಂದೆ ಇಟ್ಟು ಪತ್ರಿಭಟನೆ ಮಾಡುತ್ತಿರುವ ಘಟನೆ ಕುಮಾರೇಶ್ವರ ಆಸ್ಪತ್ರೆಯಲ್ಲಿ ನಡೆದಿದೆ.
ಜಮಖಂಡಿ ತಾಲೂಕಿನ ಚಿಕ್ಕ ಪಡಸಲಗಿ ಗ್ರಾಮದ ನಿವಾಸಿಯಾದ ಪರಮಾನಂದ ಐಗಳಿ (25) ಎಂಬ ಯುವಕನೇ ಮೃತಪಟ್ಟ ದುರ್ದೈವಿ. ನವೆಂಬರ್ 03 ನಡೆದ ವೈದ್ಯರ ಮುಷ್ಕರದ ದಿನ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಪರಮಾನಂದರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ.
ಪರಮಾನಂದ ಅವರಿಗೆ ತೀವ್ರ ವಾಂತಿ ಬೇದಿಯಿಂದ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮೂರು ದಿನಗಳಿಂದ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಶನಿವಾರ ತಡರಾತ್ರಿ ಪರಮಾನಂದ ಅವರಿಗೆ ವೈದ್ಯರು ಇಂಜೆಕ್ಷನ್ ನೀಡಿದ ನಂತರ ಮೃತಪಟ್ಟಿದ್ದಾರೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ಇರುವ ಕಾರಣದಿಂದಲೇ ಮೃತ ಪಟ್ಟಿದ್ದಾರೆ ಎಂದು ತಾಯಿ ಹಾಗೂ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೇ ಆಸ್ಪತ್ರೆಯ ಮುಂದೇ ಶವವಿಟ್ಟು ಪ್ರತಿಭಟನೆ ನಡೆಸಿ ನ್ಯಾಯಕೊಡಿಸಬೇಕೆಂದು ಕಣ್ಣೀರಿಟ್ಟಿದ್ದಾರೆ.