ಬೆಂಗಳೂರು: ಒಳ ಮೀಸಲಾತಿ (Internal Reservation) ವರ್ಗೀಕರಣದಲ್ಲಿ 89 ಸಮುದಾಯಗಳಿಗೆ ಅನ್ಯಾಯವಾಗಿದೆ. ಕೂಡಲೇ ಇದನ್ನ ಹಿಂಪಡೆಯಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ (C.S.Dwarakanath) ತಿಳಿಸಿದ್ದಾರೆ.
ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಮಂಗಳವಾರ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ದ್ವಾರಕನಾಥ್, ಬಿಜೆಪಿ ಸರ್ಕಾರ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಿದೆ. ಗ್ರೂಪ್ 1 ರಲ್ಲಿ 6 ಪರ್ಸೆಂಟ್ ಮೀಸಲಾತಿಯನ್ನು ಮಾದಿಗ ಸಮುದಾಯ ಸೇರಿ ಇನ್ನಿತರ ಸಮುದಾಯಕ್ಕೆ ನೀಡಲಾಗಿದೆ. ಗ್ರೂಪ್ 2 ರಲ್ಲಿ, 5.5 ಪರ್ಸೆಂಟ್ ಮೀಸಲಾತಿಯನ್ನು ಹೊಲೆಯ ಸಂಬಂಧಿಸಿದ ಜಾತಿಗಳಿಗೆ ನೀಡಲಾಗಿದೆ. ಸ್ಪಶ್ಯ ಜಾತಿಗಳಿಗೆ 4.5 ಪರ್ಸೆಂಟ್ ಮೀಸಲಾತಿ ಕಲ್ಪಿಸಲಾಗಿದೆ. ಇದನ್ನು ಹೊರತುಪಡಿಸಿ 89 ಜಾತಿಗಳಿಗೆ ಕೇವಲ 1 ಪರ್ಸೆಂಟ್ ಮೀಸಲಾತಿ ನೀಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜ್ಯ ನಾಯಕರು ತಂದ ಪಟ್ಟಿ ನೋಡಿ ಮೋದಿ ಕೆಂಡ : ಬಿಜೆಪಿ ಸಭೆಯಲ್ಲಿ ಏನಾಯ್ತು?
89 ಜಾತಿಯಲ್ಲಿ ಹೊಲೆಯ, ಮಾದಿಗ ಸಂಬಂಧಿತ ಜಾತಿಗಳಿವೆ. ಈ 89 ಸಮುದಾಯಗಳು ಬಹಳ ವಿಚಿತ್ರವಾಗಿರೋ ಸಮುದಾಯ. ಆದಿ ಅಂಧ್ರ, ಬೈರ, ಬಾಕೋಡ, ಬತ್ತಡ, ಬಂಡಿ ಈ ರೀತಿಯಾಗಿ ಹಲವಾರು ಸಮುದಾಯಗಳಿವೆ. ಈ ಹಿಂದೆ ಹೊಲಯ ಹಾಗೂ ಮಾದಿಗ ಸಮುದಾಯದ ಜೊತೆ ಮೀಸಲಾತಿ ಹಂಚಿಕೆ ಆಗಿತ್ತು. ಈಗ ಅವುಗಳನ್ನ ಬೇರ್ಪಡಿಸಿ ಅನ್ಯಾಯ ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಯಾವುದೇ ವರದಿ, ಸಂಶೋಧನೆಯ ಬಗ್ಗೆ ಸರ್ಕಾರ ಗಮನಹರಿಸಿಲ್ಲ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಿದ್ರೆ, ಸರ್ಕಾರ ಅದರ ಸಂಪೂರ್ಣ ಡೇಟಾ ನೀಡಲಿ. ಯಾವುದೇ ಚರ್ಚೆ ಇಲ್ಲದೆ ಕೆಲ ಸಚಿವರೇ ಇದರ ಜವಬ್ದಾರಿ ಹೊತ್ತು ಘೋಷಣೆ ಮಾಡಿದ್ದಾರೆ. ಗೋವಿಂದ ಕಾರಜೋಳ, ಸುಧಾಕರ್, ಪ್ರಭು ಚೌಹಾಣ್, ಮಾಧುಸ್ವಾಮಿ ಇವರೇ ಅಂತಾರಾಷ್ಟ್ರೀಯ ತಜ್ಞರಾಗಿದ್ದಾರೆ. 89 ಸಮುದಾಯವನ್ನು ಒಂದೇ ಕಡೆ ಹಾಕಲಾಗಿದೆ. ಅವರ ಶಿಕ್ಷಣ, ಸಾಮಾಜಿಕ, ಆರ್ಥಿಕ, ಸ್ಥಿತಿಗತಿ ಬಗ್ಗೆ ಅರಿವಿಲ್ಲದೇ ಈ ರೀತಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ: HDK
ಭಂಗಿ ಸಮುದಾಯ, ಬುಡಗ ಜಂಗಮ ಸಮುದಾಯ ಕೂಡ 89 ಸಮುದಾಯದ ಪಟ್ಟಿಗೆ ಸೇರಿದೆ. 89 ಸಮುದಾಯಗಳಿಗೆ 1 ಪರ್ಸೆಂಟ್ ಮೀಸಲಾತಿ ನೀಡಿದ್ದಾರೆ. ಸರ್ಕಾರಕ್ಕೆ ಮಾನವೀಯತೆ ಅನ್ನೋದು ಇದೆಯಾ? ಕೂಡಲೇ ಇದನ್ನ ಹಿಂಪಡೆಯಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.