ನಿನ್ನೆ ಮಹಾಲಕ್ಷ್ಮಿ ಲೇಔಟ್ ನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ (Death) ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಅವರ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ 9:30 ಗಂಟೆವರೆಗೂ ಸಾರ್ವಜನಿಕರು ಹಾಗೂ ಚಿತ್ರರಂಗದ ಮಂದಿಗೆ ವ್ಯವಸ್ಥೆ ಮಾಡಲಾಗಿದೆ. ಅವರ ನಿವಾಸ ಕುಟೀರದಲ್ಲೇ ಅಂತಿಮ ದರ್ಶನವನ್ನು ಮಾಡಬಹುದಾಗಿದೆ.
ಬೆಳಗ್ಗೆ 9:30 ಗಂಟೆಯ ನಂತರ ಚನ್ನರಾಯಪಟ್ಟಣದ ಹಿರಿಸಾವೆ ಬಳಿಯ ಫಾರಂ ಹೌಸ್ ನತ್ತ ಪಾರ್ಥಿವ ಶರೀರವನ್ನು ತಗೆದುಕೊಂಡು ಹೋಗಲಾಗುತ್ತಿದ್ದು, ಸೌಂದರ್ಯ ಜಗದೀಶ್ ಅವರ ಫಾರಂ ಹೌಸ್ ನಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ಅಂತ್ಯಕ್ರಿಯೆ ನೆರವೇರಲಾಗುವುದು.
ಅಂತಿಮ ವಿಧಿವಿಧಾನವನ್ನು ಜಗದೀಶ್ ಅವರ ಪುತ್ರ ಸ್ನೇಹಿತ್ ನೆರವೇರಿಸುತ್ತಾರೆ ಎಂದು ಕುಟುಂಬದ ಮೂಲಗಳ ತಿಳಿಸಿವೆ. ಪಾರ್ಥಿವ ಶರೀರ ಕೊಂಡೊಯ್ಯಲು ಚಿರಶಾಂತಿ ವಾಹನದ ಸಿದ್ದತೆ ಕೂಡ ಮಾಡಲಾಗಿದೆ.
ನಿನ್ನೆ ದರ್ಶನ್, ಪ್ರೇಮ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಅಮೂಲ್ಯ, ಗುರುಕಿರಣ್ ಸೇರಿದಂತೆ ಅನೇಕ ತಾರೆಯರು ಅಂತಿಮ ದರ್ಶನ ಪಡೆದಿದ್ದಾರೆ. ಇವತ್ತು ಕೂಡ ಚಿತ್ರರಂಗದ ಅನೇಕ ಗಣ್ಯರು ಮತ್ತು ಉದ್ಯಮಿಗಳು ಕೂಡ ಅಂತಿಮ ದರ್ಶನ ಪಡೆಯುತ್ತಿದ್ದಾರೆ.