ಬೆಂಗಳೂರು: ಕಿಚ್ಚ ಸುದೀಪ್ ಅವರು ವೀರ ಮದಕರಿ ಚಿತ್ರದ ಬಗ್ಗೆ ಅಭಿಮಾನಿಗಳಿಗಾಗಿ ಪತ್ರ ಬರೆದ ಹಿನ್ನೆಲೆಯಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು ಈ ಚಿತ್ರ ನನ್ನ 4 ವರ್ಷದ ಕನಸು. ನಾನು ರಾಜೇಂದ್ರ ಬಾಬು ಅವರ ಜೊತೆ ಸೇರಿ ನಾಲ್ಕು ವರ್ಷದಿಂದ ಮಾತನಾಡಿ ಅವರ ಅಭಿಪ್ರಾಯ ಪಡೆದಿದ್ದೇನೆ. ರಾಜೇಂದ್ರ ಬಾಬು ಅವರು ಹಿರಿಯ ನಿರ್ದೇಶಕರಾಗಿದ್ದರಿಂದ 4 ವರ್ಷದಿಂದ ನಾನು ಇತಿಹಾಸದ ಬಗ್ಗೆ ಎಲ್ಲ ಮಾಹಿತಿ ಪಡೆದಿದ್ದೇನೆ ಎಂದರು. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದರ್ಶನ್, ಸುದೀಪ್- ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ
ಚಿತ್ರದುರ್ಗದ ಇತಿಹಾಸದಲ್ಲಿ ಸುಮಾರು 10 ರಿಂದ 13 ಪಾಳೇಗಾರರು ಇದ್ದಾರೆ. 13 ಪಾಳೇಗಾರರಲ್ಲಿ ಯಾರು ಯಾವ ರೀತಿಯಲ್ಲಿ ಚಿತ್ರದುರ್ಗದ ಇತಿಹಾಸದಲ್ಲಿ ಹೆಸರು ಮಾಡಿದ್ದಾರೆ ಎನ್ನುವುದನ್ನು ನೋಡಿಕೊಂಡು ಸಿನಿಮಾ ಮಾಡಬೇಕು. ಒಂದು ಸಾಧಾರಣ ಸಿನಿಮಾ ಮಾಡಬೇಕಾದರೆ ನಮಗೆ 8 ತಿಂಗಳಿಂದ ಒಂದು ವರ್ಷ ಬೇಕಾಗುತ್ತಿದೆ. ಆದರೆ ಇಂತಹ ಐತಿಹಾಸಿಕ ಸಿನಿಮಾ ಮಾಡಬೇಕೆಂದರೆ ನಾಲ್ಕು ವರ್ಷ ಅವಧಿ ಬೇಕಾಗುತ್ತದೆ ಎಂದು ಹೇಳಿದರು.
ಹೆಸರಾಂತ ಸಾಹಿತಿ ಬಿ.ಎಲ್ ವೇಣು ಅವರ ಜೊತೆ ಈ ಚಿತ್ರ ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳಲು 2 ವರ್ಷದಿಂದ ಸಂಪರ್ಕದಲ್ಲಿದ್ದೇನೆ. ಕಥೆಯ ಬಗ್ಗೆ ಎಲ್ಲ ಮಾಹಿತಿ ಪಡೆದ ನಂತರ ಚಿತ್ರದ ನಾಯಕ ಯಾರು ಆಗಬೇಕು ಎಂದು ನಾನು ಯೋಚಿಸಿರಲಿಲ್ಲ. ಮುನಿರತ್ನ ಅವರು ಕುರುಕ್ಷೇತ್ರ ಸಿನಿಮಾವನ್ನು ಮಾಡುವಾಗ ದರ್ಶನ್ ಅವರ ಗೆಟಪ್ ನೋಡಿ ಅವರಿಗೆ ಈ ಚಿತ್ರದ ಬಗ್ಗೆ ಕೇಳಿದೆ. ಆಗ ದರ್ಶನ್ ಅವರು ನಾನು ಈ ಸಿನಿಮಾ ಮಾಡುತ್ತೇನೆ. ನಿಮ್ಮಂತಹ ನಿರ್ಮಾಪಕರಿಗೆ ನಾನು ಸಿನಿಮಾ ಮಾಡದೇ ಇದ್ದರೆ ಇನ್ನು ಯಾರಿಗೆ ಸಿನಿಮಾ ಮಾಡಬೇಕೆಂದು ಹೇಳಿದರು. ನಾನು ಇದೂವರೆಗೂ ನನ್ನ ಚಿತ್ರವನ್ನು ಎಲ್ಲೂ ಪ್ರಚಾರ ಮಾಡಿರಲಿಲ್ಲ. ಹಾಗೆಯೇ ಈಗ ಕೂಡ ನಾನು ನನ್ನ ಚಿತ್ರವನ್ನು ಎಲ್ಲಿಯೂ ಪ್ರಚಾರ ಮಾಡಲಿಲ್ಲ. ಸುದೀಪ್ ಏನೇ ಮಾಡಿದರೂ ನನ್ನನ್ನು ಕರೆಯುತ್ತಾರೆ. ನಾವು ಆತ್ಮೀಯವಾಗಿ ಇದ್ದೇವೆ. ಆದರೆ ಈ ಚಿತ್ರದ ವಿಷಯವನ್ನು ಇಬ್ಬರು ಎಲ್ಲಿಯೂ ಪ್ರಸ್ತಾಪ ಮಾಡಿರಲಿಲ್ಲ. ಹಾಗಾಗಿ ಈ ವಿಷಯ ನಮಗೆ ಗೊತ್ತಿರಲಿಲ್ಲ ಎಂದು ತಿಳಿಸಿದರು.
ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ಈ ಪಾತ್ರದಲ್ಲಿ ನೋಡಬೇಕೆಂದು ಇಚ್ಚಿಸುತ್ತಾರೆ. ತಮ್ಮ ಅಭಿಮಾನಿಗಳ ಆಸೆಯನ್ನು ಆ ನಟರು ಪೂರೈಸಬೇಕು. ಒಂದೇ ನಾಯಕನ ಎರಡು ಸಿನಿಮಾ ಮಾಡಿದರೆ ಅದು ತಪ್ಪಾಗುತ್ತದೆ. 13 ಪಾಳೇಗಾರರಿದ್ದು ಬೇರೆ ಬೇರೆ ವೀರ ಮದಕರಿ ನಾಯಕನ ಪಾತ್ರವನ್ನು ಮಾಡಬಹುದು. ನಾನು ಕೊನೆಯ ಪಾಳೇಗಾರನ ಕತೆಯನ್ನು ಸಿನಿಮಾ ಮಾಡುತ್ತಿದ್ದೇನೆ ಎಂದು ರಾಕ್ಲೈನ್ ವೆಂಕಟೇಶ್ ಸ್ಪಷ್ಟನೆ ನೀಡಿದರು.
ಈ ಚಿತ್ರದಿಂದ ಯಾವುದೇ ಗೊಂದಲವಾಗುವುದಿಲ್ಲ. ಏಕೆಂದರೆ 13 ವೀರ ಮದಕರಿ ಇದ್ದಾರೆ. ಇಬ್ಬರು ಮದಕರಿ ನಾಯಕನ ಕತೆ ಬಂದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಎರಡು ಚಿತ್ರ ಚೆನ್ನಾಗಿ ಯಶಸ್ಸು ಕಾಣಲಿ. ನನ್ನ ಹಾಗೂ ಸುದೀಪ್ ಭಾಂದವ್ಯ ಚೆನ್ನಾಗಿದೆ. ಹಾಗಾಗಿ ನಾವಿಬ್ಬರು ನಮ್ಮ ಚಿತ್ರದ ಕತೆಗಳ ಬಗ್ಗೆ ಮಾತನಾಡಿ ಸಿನಿಮಾ ಮಾಡುತ್ತೇವೆ ಎಂದು ರಾಕ್ಲೈನ್ ವೆಂಕಟೇಶ್ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv