ಬೆಂಗಳೂರು: ತಾವು ಕನ್ನಡಪರ ಸಂಘಟನೆಯ ಕಾರ್ಯಕರ್ತರೆಂದು ಹೇಳಿ ಟೋಲ್ ಸಿಬ್ಬಂದಿಯ ಮೇಲೆ ಮನ ಬಂದಂತೆ ಹಲ್ಲೆ ಮಾಡಿರುವ ಘಟನೆ ನೆಲಮಂಗಲ ಸಮೀಪದ ಲ್ಯಾಂಕೋ ದೇವಿಹಳ್ಳಿ ಟೋಲ್ ಗೇಟ್ ನಲ್ಲಿ ನಡೆದಿದೆ.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಟೋಲ್ ಶುಲ್ಕ ಕಟ್ಟುವ ಕುರಿತು ಸಿಬ್ಬಂದಿಯೊಂದಿಗೆ ವಾದಕ್ಕಿಳಿದಿದ್ದಾರೆ. ಟೋಲ್ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಹೋಗಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಟೋಲ್ ಬೂತ್ ಗ್ಲಾಸ್ ಗಳನ್ನು ಹೊಡೆದುಹಾಕಿದ್ದಾರೆ.
ನಮ್ಮ ರಾಜ್ಯದಲ್ಲಿ ನಾವೇಕೆ ಟೋಲ್ ಕೊಡಬೇಕು? ಇದು ನಮ್ಮ ನೆಲ ನಾವು ಟೋಲ್ ಕಟ್ಟಲ್ಲ ಎಂದು ಟೋಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಟೋಲ್ ಕಟ್ಟಲೇ ಬೇಕು ಎಂದು ಸಿಬ್ಬಂದಿ ಹೇಳಿದಾಗ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಟೋಲ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಮತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಆದರೆ ಸಂಘಟನೆಯ ಕಾರ್ಯಕರ್ತರು ಮಾತ್ರ ಟೋಲ್ ಸಿಬ್ಬಂದಿ ತಮ್ಮ ಧ್ವಜ ಹಾಗೂ ಶಾಲಿನ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಅವರು ಕ್ಷಮಾಪಣೆ ಕೇಳಬೇಕೆಂದು ಕೆಲ ಕಾಲ ಧರಣಿ ನಡೆಸಿದರು.