ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಗೆ ನಿಯೋಜನೆಗೊಂಡಿದ್ದ ಶ್ವಾನ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದೆ.
9 ವರ್ಷದ ಲ್ಯಾಬ್ರಾಡರ್ ತಳಿಯ ಕಪ್ಪು ಶ್ವಾನ ಹಲ್ಲುನೋವಿನಿಂದ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪಂಜಾಬಿನ ಲೂಧಿಯಾನದ ಗುರು ಅಂಗದ್ ದೇವ್ ವೆಟರ್ನಿಟಿ ಆಂಡ್ ಅನಿಮಲ್ ಸೈನ್ಸ್ ಯೂನಿವರ್ಸಿಟಿಯಲ್ಲಿ ಸರ್ಜರಿಗೆ ಒಳಗಾಗಿದೆ.
ಮೋದಿ ಭದ್ರತೆಯಲ್ಲಿ ಈ ಶ್ವಾನ ಪ್ರಮುಖ ಪಾತ್ರವಹಿಸುತ್ತಿದ್ದು, ದೊಡ್ಡ ಮೊತ್ತದ ಬಹುಮಾನವನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಪತ್ತೆ ಕಾರ್ಯಕ್ಕಾಗಿ ಗೃಹ ಸಚಿವಾಲಯ ನೀಡುವ 15 ಲಕ್ಷ ರೂ. ಬಹುಮಾನವನ್ನು ಗೆದ್ದುಕೊಂಡ ಹೆಗ್ಗಳಿಕೆ ಈ ನಾಯಿಗಿದೆ. ಈ ಕಪ್ಪು ಬಣ್ಣದ ಲ್ಯಾಬ್ರಡರ್ ಕಳೆದ 6 ವರ್ಷಗಳಿಂದ ಪ್ರಧಾನಿಯ ಭದ್ರತಾ ತಂಡದ ಜೊತೆಗಿದೆ.
ಶಸ್ತ್ರಚಿಕಿತ್ಸೆ ಯಾಕೆ?
ಬಾಯಿಯಲ್ಲಿ ಗಡ್ಡೆ ಬೆಳೆದಿದ್ದು, ಇದರಿಂದ ಶ್ವಾನಕ್ಕೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅಸ್ವಸ್ಥವಾಗಿದ್ದ ಶ್ವಾನವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಡ್ಡೆಯನ್ನು ಕೂಡಲೇ ತೆಗೆಯಬೇಕು. ಇಲ್ಲವೆಂದಲ್ಲಿ ಇದು ಬಾಯಿಯ ಇತರ ಕಡೆ ಪಸರಿಸುವ ಸಾಧ್ಯತೆ ಇತ್ತು. ಅಷ್ಟೇ ಅಲ್ಲದೇ ಹಲ್ಲುಗಳಿಗೂ ಇದರಿಂದ ತೊಂದೆಯಾಗುವ ಸಾಧ್ಯತೆ ಇತ್ತು ಎಂದು ಮೂಲಗಳು ತಿಳಿಸಿವೆ. ಈಗ ಗಡ್ಡೆಯನ್ನು ಹೊರತೆಗೆಯಲಾಗಿದ್ದು, ಸದ್ಯ ಶ್ವಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.