ಯತ್ನಾಳ್ ಹೋರಾಟಕ್ಕೆ ಜಟ್ಕಾ ಕಟ್ – ಖರ್ಗೆ ವ್ಯಂಗ್ಯ
ಬೆಂಗಳೂರು: ಬಿಜೆಪಿಯವರು (BJP) ಶಾಸಕ ಯತ್ನಾಳ್ (Basanagouda Patil Yatnal) ಉಚ್ಚಾಟನೆ ಮಾಡುವ ಮೂಲಕ ಬಿಜೆಪಿ ಶುದ್ಧೀಕರಣ ಸಾಧ್ಯವಿಲ್ಲ, ಭ್ರಷ್ಟಾಚಾರ, ಕುಟುಂಬ ರಾಜಕೀಯಕ್ಕೆ ನಮ್ಮ ಬೆಂಬಲ ಅಂತ ತೋರಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಲೇವಡಿ ಮಾಡಿದ್ದಾರೆ.
ಯತ್ನಾಳ್ ಉಚ್ಚಾಟನೆ ಬಗ್ಗೆ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಈ ವೇಳೆ, ಯತ್ನಾಳ್ ಉಚ್ಚಾಟನೆ ಬಿಜೆಪಿಯ ವೈಯಕ್ತಿಕ ವಿಚಾರ. ನಾವು ಅದರ ಬಗ್ಗೆ ಮಾತಾಡಲ್ಲ. ಅವರ ಪಾರ್ಟಿ ಅವರು ಅವರನ್ನು ಇಟ್ಟುಕೊಳ್ತಾರೋ, ತೆಗೆದು ಹಾಕ್ತಾರೋ ನಮಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಯತ್ನಾಳ್ ಅವರು ಕುಟುಂಬ ರಾಜಕೀಯ, ಭ್ರಷ್ಟರ ವಿರುದ್ದ ಹೋರಾಟ ಮಾಡ್ತಿದ್ದರು. ಈಗ ಯತ್ನಾಳ್ ಅವರ ಬಿಜೆಪಿ ಶುದ್ಧೀಕರಣ ಹೋರಾಟಕ್ಕೆ ಕೇಂದ್ರದ ಹೈಕಮಾಂಡ್ ಜಟ್ಕಾ ಕಟ್ ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಬಿಜೆಪಿ ನಾಯಕರು ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ನಮಗೆ ಭ್ರಷ್ಟಾಚಾರ, ಕುಟುಂಬ ರಾಜಕೀಯ ಇಷ್ಟ ಎಂದು ತಿಳಿಸಿದ್ದಾರೆ. ಫೋಕ್ಸೋ ಆರೋಪ ಇರೋರ ನೇತ್ರತ್ವದಲ್ಲಿ ಚುನಾವಣೆ ಮಾಡ್ತೀವಿ ಎಂಬ ಸಂದೇಶ ಕೊಟ್ಟಿದ್ದಾರೆ. ಬ್ಲ್ಯಾಕ್ಮೇಲ್ ಮಾಡೋರಿಗೆ ನಾವು ಬೆಲೆ ಕೊಡೋದು ಅಂತ ಬಿಜೆಪಿ ಸ್ಪಷ್ಟಪಡಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.