ಮುಂಬೈ: ಆಸೀಸ್ ಸರಣಿಯಲ್ಲಿ ವೇಳೆ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ನಡೆದಿದ್ದ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ.
ಸರಣಿಯಲ್ಲಿ ಗಾಯಗೊಂಡಿದ್ದ ಪೃಥ್ವಿಶಾರನ್ನು ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸರಣಿಯಿಂದ ಕೈ ಬಿಡಲಾಗಿತ್ತು ಎಂದು ಕೆಲ ವರದಿಗಳು ಪ್ರಕಟಗೊಂಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೃಥ್ವಿ ಶಾ, ಗಾಯದ ಸಮಸ್ಯೆಯಿಂದ ಹೊರಗುಳಿಯ ಬೇಕಾಯಿತು. ಆದರೆ ಅಶಿಸ್ತಿನ ವರ್ತನೆ ವರದಿಗಳು ಎಲ್ಲವೂ ಕಪೋಲಕಲ್ಪಿತ ಎಂದು ಅಲ್ಲಗೆಳೆದಿದ್ದಾರೆ.
19 ವರ್ಷದ ಪೃಥ್ವಿ ಶಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆದೆ ಪಂದ್ಯದ ವೇಳೆ ಗಾಯಗೊಂಡ ಪರಿಣಾಮ ಸರಣಿಯ ನಡುವೆ ಭಾರತಕ್ಕೆ ಹಿಂದಿರುಗಿದ್ದರು. ಸದ್ಯ ಚೇತರಿಸಿಕೊಂಡಿರುವ ಪೃಥ್ವಿ ಶಾ ಐಪಿಎಲ್ ಆಡಲು ಅಭ್ಯಾಸದಲ್ಲಿ ತೊಡಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಆಡಲಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪೃಥ್ವಿ ಶಾ, ನಾನು ಟೀಂ ಇಂಡಿಯಾ ಡ್ರೆಸಿಂಗ್ ರೂಮ್ ಗೆ ಹೋಗುಚ ವೇಳೆ ನನ್ನೊಂದಿಗೆ 10 ವರ್ಷ ಅನುಭವವುಳ್ಳ ಹಿರಿಯ ಆಟಗಾರರು ಇದ್ದರು. ಆದರೆ ನಾಯಕ ಹಾಗೂ ಕೋಚ್ ಇಲ್ಲಿ ಹಿರಿಯ, ಕಿರಿಯ ಎಂಬುವುದಿಲ್ಲ. ನೀನು ಯಾವುದೇ ಸಮಯದಲ್ಲಿ ಆಟಗಾರರೊಂದಿಗೆ ಮಾತನಾಡಬಹುದು, ನಿನ್ನ ಪ್ರಶ್ನೆಗಳ ಮೂಲಕ ಅವರಿಗೆ ಕಿರಿಕಿರಿ ಕೂಡ ಮಾಡಬಹುದು ಎಂದು ತಿಳಿದಿದ್ದಾಗಿ ಹೇಳಿದರು.
ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಆಕಾಡೆಮಿ ನನಗೆ ಬಹುತೇಕ ಚೇತರಿಸಿಕೊಳ್ಳಲು ಸಹಾಯ ಮಾಡಿದೆ. ಕೋಚ್ ಹಾಗೂ ತಜ್ಞರು ಉತ್ತಮ ಸಹಕಾರ ನೀಡಿದ್ದಾರೆ. ಹಲವು ಅನುಭವಿ ಆಟಗಾರರ ಆಡುವುದನ್ನು ನಾನು ಗಮನಿಸಿದ್ದೇನೆ. ಸದ್ಯ ತಂಡದಲ್ಲಿ ನನಗೆ ನಂ.5 ಕ್ರಮಾಂಕ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.