– ಟಕೆಟ್ ಸಿಗದಿದ್ದರೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದ ಶಾಸಕ
ಮೈಸೂರು: ಮೋದಿ (Narendra Modi) ಅವರು ಬೆನ್ನ ಮೇಲೆ ಗುದ್ದಿದ ಭಾರ ನನ್ನ ಮೇಲಿದೆ. ಶಾಸಕನಾಗುವುದಕ್ಕಿಂತ ಮೋದಿ ಅಂತಹವರ ಪ್ರೀತಿ ನನಗೆ ಮುಖ್ಯ ಎಂದು ಶಾಸಕ ಎಸ್.ಎ ರಾಮದಾಸ್ (SA Ramadas) ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆಗೆ ಕೆ.ಆರ್ ಕ್ಷೇತ್ರದಿಂದ (Krishnaraja Constituency) ಬಿಜೆಪಿ ಟಿಕೆಟ್ (BJP Ticket) ಕೈತಪ್ಪಿದ ಹಿನ್ನೆಲೆಯಲ್ಲಿ ತಮ್ಮ ನಿವಾಸದ ಎದುರು ಬೆಂಬಲಿಗರೊಂದಿಗೆ ನಿರ್ಣಾಯಕ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ರಾಮ್ದಾಸ್ ಹತ್ತಿರ ಕರೆದು ಬಾಗಿಸಿ ಬೆನ್ನಿಗೆ ಗುದ್ದಿದ ಮೋದಿ- ಪ್ರಧಾನಿಯಿಂದ ಶಾಸಕರಿಗೆ ಆಪ್ತ ಹಾರೈಕೆ
ಶಾಸಕನಾಗುವುದಕ್ಕಿಂತ ಮೋದಿ ಅಂತಹವರ ಪ್ರೀತಿ ನನಗೆ ಮುಖ್ಯ. ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ರೆ 10 ರಿಂದ 12 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಆದ್ರೆ ನನಗೆ ಮಹಾನ್ ನಾಯಕನ ಜವಾಬ್ದಾರಿಯಿದೆ. ನಿಮ್ಮ ಶಾಸಕ ಇದುವರೆಗೂ ಯಾವುದೇ ತಪ್ಪು ಮಾಡಿಲ್ಲ. ಆದ್ರೂ ನನ್ನ ಮೇಲೆ ಹಲವು ಆಪಾದನೆ ಬಂದವು. ಅದಕ್ಕೆ ಕಾಲವೇ ಉತ್ತರ ಕೊಡುತ್ತೆ. ಯಾವತ್ತು ಹುಟ್ಟುತ್ತೀವೊ, ಯಾವತ್ತು ಸಾಯುತ್ತೀವೊ ಗೊತ್ತಿಲ್ಲ. ನನಗೆ ತಾಯಿ ಭಾರತಾಂಬೆ ಮುಖ್ಯ. ಇಡೀ ದೇಶ ನಮ್ಮ ರಾಜ್ಯದ ಕಡೆ ನೋಡುತ್ತಿದೆ. ನಿಮ್ಮ ಶಾಸಕನಾಗಿ ನಿಮ್ಮ ಜೊತೆಯೇ ಇರುತ್ತೇನೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕೆ.ಆರ್ ಕ್ಷೇತ್ರ ಉಳಿಸಿಕೊಳ್ಳುವುದು ನಮ್ಮ ಉದ್ದೇಶ ಅಷ್ಟೇ ಎಂದು ರಾಮದಾಸ್ ಸ್ಪಷ್ಟಪಡಿಸಿದ್ದಾರೆ.
ಮೋದಿ ಅವರು ಬೆನ್ನಮೇಲೆ ಗುದ್ದಿದ ಭಾರ ನನ್ನ ಮೇಲಿದೆ. ಮಂತ್ರಿ ಮಾಡದಿದ್ದರೂ ನಾನು ಪಕ್ಷದ ವಿರುದ್ಧ ಮಾತನಾಡಲಿಲ್ಲ. ನೋವಿನಲ್ಲೂ ಬಿಜೆಪಿಗಾಗಿ ಕೆಲಸ ಮಾಡಿದೆ. ಟಿಕೆಟ್ ಸಿಗಲಿಲ್ಲ ಅಂತಾ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಟಿಕೆಟ್ ಸಿಗದಿದ್ದರೂ ಪಕ್ಷಕ್ಕಾಗಿ ದುಡಿಯುತ್ತೇನೆ. ದ್ರೋಹ ಮಾಡುವುದನ್ನು ನಾನು ಕಲಿತಿಲ್ಲ. ಏಕೆಂದರೆ ಪಕ್ಷ ನನಗೆ ತಾಯಿ ಸಮಾನ. ನೋವುಂಟಾಗದಂತೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂತೋಷ್ ಹೆಸರು ತಂದಿದ್ದು ಶೆಟ್ಟರ್ಗೆ ಶೋಭೆ ತರಲ್ಲ – ಇನ್ನು ಅವ್ರ ದಾರಿ ಅವರಿಗೆ ನಮ್ಮ ದಾರಿ ನಮಗೆ: ಬಿಎಸ್ವೈ
ನಾನು ಯಾವುದೇ ಪೋಸ್ಟ್ ಮಾಟಮ್ ಕೆಲಸ ಮಾಡುವುದಿಲ್ಲ. ಏನಾಗಿದೆ ಎಲ್ಲವನ್ನೂ ಚಾಮುಂಡಿ ದೇವರ ಮುಂದೆ ಹೇಳಿದ್ದೇನೆ. ತಾಯಿಗೆ ಎಲ್ಲವನ್ನೂ ಬಿಟ್ಟಿದ್ದೇನೆ. ತಾಯಿ ಚಾಮುಂಡಿ ಮುಂದೆ ಯಾವ ಅವಕಾಶ ಕೊಡುತ್ತಾಳೋ ಅದು ತಾಯಿಗೆ ಬಿಟ್ಟಿದ್ದು. ಒಟ್ಟಿನಲ್ಲಿ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುತ್ತೇನೆ. ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸುತ್ತೇನೆ. ನನಗೆ ಶಾಸಕ ಸ್ಥಾನ ಮುಖ್ಯವಲ್ಲ. ದೇಶದ ಪ್ರಧಾನಿ ಮುಖ್ಯ ಎಂದು ನುಡಿದಿದ್ದಾರೆ.
ಸಚಿವ ಸ್ಥಾನಕ್ಕೆ ಪೇಮೆಂಟ್ ಸೀಟ್ ಇತ್ತು: ಬಿಜೆಪಿ ಸರ್ಕಾರದಲ್ಲಿ (BJP Government) ಸಚಿವ ಸ್ಥಾನಕ್ಕೆ ಮೆರಿಟ್ ಸೀಟ್, ಪೇಮೆಂಟ್ ಸೀಟ್ ಎರಡೂ ಇತ್ತು. ನೀವೆಲ್ಲಾ ನಿಮ್ಮ ರಾಮದಾಸ್ ಮಂತ್ರಿ ಆಗುತ್ತಾನೆ ಎಂದುಕೊಂಡಿದ್ರಿ. ನಾನು ಮೆರಿಟ್ ಸ್ಟೂಡೆಂಟ್ ಆಗಿದ್ದರಿಂದ ಮಂತ್ರಿ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.