ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಇದೆ 12 ರಂದು ನೆಡೆಯಲಿರುವ ಪ್ರಧಾನಿ ಮೋದಿ ಸಮಾವೇಶಕ್ಕೆ ಕೊನೆಗೂ ಸ್ಥಳ ಫೈನಲ್ ಆಗಿದೆ.
ಕಳೆದ 2 ದಿನದಿಂದ ಮೋದಿ ಕಾರ್ಯಕ್ರಮಕ್ಕೆ ಜಾಗದ ವಿಚಾರವಾಗಿ ಬಿಜೆಪಿಗರಿಗೆ ತಲೆನೋವಾಗಿತ್ತು. ಮೊದಲು ಗುರುತಿಸಿರುವ ಜಾಗದಲ್ಲಿ ಟ್ರಾಫಿಕ್ ಸಮಸ್ಯೆಯ ಕಾರಣದಿಂದ ಡಿಸಿ ಮತ್ತು ಎಸ್ಪಿ ಪರಿಶೀಲನೆ ನಡೆಸಿ ಬದಲಾವಣೆ ಮಾಡಿ ಎಂದು ಬಿಜೆಪಿಯ ಶಾಸಕರಿಗೆ ಸೂಚನೆ ನೀಡಿದ್ದರು.
ಶಾಸಕ ಪರಣ್ಣ ಅದಾಗಲೇ ಗುರುತಿಸಿದ್ದ ಸ್ಥಳದಲ್ಲಿ ಪೂಜಾ ಕಾರ್ಯಕ್ರಮ ನಡೆಸಿ ವೇದಿಕೆ ನಿರ್ಮಾಣ ಕಾರ್ಯ ನಡೆಸಿದ್ದರು. ಆದರೆ ಟ್ರಾಫಿಕ್ ಸಮಸ್ಯೆಯ ಕಾರಣ ಜಾಗವನ್ನು ಸ್ಥಳಾಂತರ ಮಾಡಿ ಎನ್ನುವ ಸೂಚನೆ ಮೇರೆಗೆ ಇದೀಗ ಕನಕಗಿರಿ ರಸ್ತೆ ಕೃಷಿ ವಿಜ್ಞಾನ ಕೇಂದ್ರ ಬಳಿಯಿರುವ ಕಾಂಗ್ರೆಸ್ ಮುಖಂಡರ ಜಮೀನನ್ನು ಅಂತಿಮ ಗೊಳಿಸಿದೆ.
ಇದಕ್ಕೂ ಮುನ್ನ ಮೊದಲು ಇದೇ ಜಾಗವನ್ನು ಗುರುತಿಸಿದ್ದು, ಅದು ಕಾಂಗ್ರೆಸ್ ಮುಖಂಡ ಎಂ.ನಾಗಪ್ಪ ಅವರ ಸಂಬಂಧಿಯ ಜಾಗವಾಗಿದ್ದರಿಂದ ಮೋದಿ ಸಮಾವೇಶಕ್ಕೆ ಜಾಗ ಕೊಡದಿರಲು ನಿರಾಕರಿಸಿದ್ದರು. ಈ ಕಾರಣದಿಂದಾಗಿ ಶಾಸಕ ಪರಣ್ಣ ರಾಜ್ಯ ಹೆದ್ದಾರಿಯ ರೈಲ್ವೆ ನಿಲ್ದಾಣ ಬಳಿ ಇರುವ ಜಾಗವನ್ನು ಫಿಕ್ಸ್ ಮಾಡಿದ್ದರು. ಡಿಸಿ ಮತ್ತು ಎಸ್ಪಿ ಪರಿಶೀಲನೆ ನಂತರ ಶಾಸಕರು ಗುರುತಿಸಿದ್ದ ಜಾಗ ಬದಲಾವಣೆ ಮಾಡಿದ್ದಾರೆ.
ಎಂ.ನಾಗಪ್ಪ ಅವರನ್ನು ಮನವೊಲಿಸಿ ಕೊನೆಗೂ ಕನಕಗಿರಿ ರಸ್ತೆಯ ಕೃಷಿ ವಿಜ್ಞಾನ ಕೇಂದ್ರದ ಬಳಿ ಇರುವ 30 ಎಕರೆ ಪ್ರದೇಶದಲ್ಲಿ ಸಮಾವೇಶ ಮಾಡಲು ಸ್ಥಳ ಅಂತಿಮಗೊಳಿಸಿದೆ. ಇನ್ನೂ ಈ ಬೃಹತ್ ಸಮಾವೇಶಕ್ಕೆ ಸುಮಾರು 3 ಲಕ್ಷ ಜನ ಸೇರುವ ಸಾದ್ಯತೆ ಇದ್ದು, ಅಂದಿನ ಕಾರ್ಯಕ್ರಮದಲ್ಲಿ ಮೋದಿ ಕೊಪ್ಪಳ, ಬಳ್ಳಾರಿ, ರಾಯಚೂರು ಅಭ್ಯರ್ಥಿಗಳ ಪರವಾಗಿ ಪ್ರಚಾರ ನೆಡಸಲಿದ್ದಾರೆ.