ಕೊಪ್ಪಳ: ಅರ್ಚಕರು ಅಂದರೆ ಜನ ದೇವರಂತೆ ಭಾವಿಸುತ್ತಾರೆ. ಅಪಾರ ಗೌರವವನ್ನಿಟ್ಟಿರುತ್ತಾರೆ. ಆದರೆ ಇಲ್ಲಿ ಪ್ರಧಾನ ಅರ್ಚಕನೊಬ್ಬ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಿಂದ ದೇವಸ್ಥಾನದ ಅಪವಿತ್ರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಐತಿಹಾಸಿಕ ಅಂಜನಾದ್ರಿ ಪರ್ವತದ ಆಂಜನೇಯ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಎಂಬಾತ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಅದರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ಜೊತೆ ದೇವಾಸ್ಥಾನದ ಆದಾಯ-ಖರ್ಚಿನ ಲೆಕ್ಕವನ್ನ ನೀಡಿಲ್ಲ. ಹೀಗಾಗಿ ದೇವಾಸ್ಥಾನದ ಟ್ರಸ್ಟಿಗಳೆಲ್ಲಾ ಸಭೆ ನಡೆಸಿ ಬಾಬಾನನ್ನು ಹೊರಹಾಕಿ ಬೇರೊಬ್ಬ ಅರ್ಚಕರನ್ನು ನೇಮಕ ಮಾಡಲು ನಿರ್ಧಾರ ಕೈಗೊಂಡಿದ್ದರು.
ಅರ್ಚಕ ದೇಗುಲದಿಂದ ಹೊರಹೋಗಲು 10 ದಿನ ಕಾಲಾವಕಾಶ ಕೇಳಿದ್ದನು. ಆದರೆ ಮೊದಮೊದಲು ಇದಕ್ಕೆ ಪದಾಧಿಕಾರಿಗಳು ಒಪ್ಪಲಿಲ್ಲ. ಏಕೆಂದರೆ ಸಾರ್ವಜನಿಕರು ಈ ಕೂಡಲೆ ಹೊರ ಹಾಕಬೇಕು ಎಂದು ಒತ್ತಡ ಹಾಕಿದ್ದರು. ಬಳಿಕ ಶೇಷಸಾಯಿ ಅರ್ಚಕರನ್ನು ತಾತ್ಕಾಲಿಕವಾಗಿ ನೇಮಿಸಿದ್ದಾರೆ ಎಂದು ಟ್ರಸ್ಟ್ ಮುಖಂಡ ಲಲಿತಾ ರಾಣಿ ಶ್ರೀರಂಗ ದೇವರಾಯಲು ಹೇಳಿದರು.
ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನಾನು ಬರುವಾಗ ಬರಿ ಕೈಲಿ ಬಂದಿದ್ದೆ. ಈಗ ದೇವಸ್ಥಾನದಿಂದ ಹೊರ ಹೋಗುವಾಗಲೂ ಬರಿಗೈಲಿ ಹೋಗುತ್ತಿದ್ದೇನೆ. ಇದರ ವಿರುದ್ಧವಾಗಿ ಕೋರ್ಟ್ ಮೊರೆ ಹೋಗುತ್ತೇನೆ ಎಂದು ವಜಾಗೊಂಡ ಅರ್ಚಕ ವಿದ್ಯಾದಾಸ ಬಾಬಾ ಹೇಳಿದ್ದಾರೆ.
ಈ ಅಕ್ರಮ ಬಾಬಾನಿಂದ ಐತಿಹಾಸಿಕ ಅಂಜನಾದ್ರಿ ಪರ್ವತದ ಆಂಜನೇಯ ದೇವಸ್ಥಾನ ಅಪವಿತ್ರವಾಗಿದೆ. ಇದು ಇನ್ನು ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೋ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.