ನವದೆಹಲಿ: ನಾನು ಆರ್ಎಸ್ಎಸ್ ಸಂಘಟನೆಗೆ ದುಡಿಯುತ್ತೇನೆ. ನನಗೆ ರಾಷ್ಟ್ರಪತಿ ಹುದ್ದೆ ಬೇಡ ಅಂತಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಭಾರತದ ರಾಷ್ಟ್ರಪತಿ ಹುದ್ದೆಗೆ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಸ್ಪಷ್ಟನೆ ನೀಡಿದ ಅವರು, ನಾನು ರಾಷ್ಟ್ರಪತಿ ಭವನಕ್ಕೆ ಹೋಗಲು ಇಚ್ಚಿಸುವುದಿಲ್ಲ. ಒಂದು ವೇಳೆ ರಾಷ್ಟ್ರಪತಿ ಹುದ್ದೆ ನೀಡುತ್ತೇವೆ ಅಂದ್ರೂ ನಾನು ಆ ಹುದ್ದೆಯನ್ನು ಸ್ವೀಕರಿಸಲ್ಲ. ನಾನು ಯಾವತ್ತೂ ಸಂಘಕ್ಕಾಗಿ ಕೆಲಸ ಮಾಡುತ್ತೇನೆ ಎಂದ ಅವರು, ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವಿಷಯಗಳೆಲ್ಲವೂ ನಡೆಯಲ್ಲ ಅಂತಾ ಹೇಳಿದ್ದಾರೆ.
ಹಿಂದೂ ರಾಷ್ಟ್ರದ ಕನಸನ್ನು ಸಾಕಾರಗೊಳಿಸಲು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿಯಾಗಿಸಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಇದುವರೆಗೆ ಬಿಜೆಪಿಯಿಂದ ಸುಷ್ಮಾ ಸ್ವರಾಜ್, ಸುಮಿತ್ರಾ ಮಹಾಜನ್ ಹಾಗೂ ಎಲ್ಕೆ ಅಡ್ವಾಣಿ ಅವರ ಹೆಸರುಗಳು ರಾಷ್ಟ್ರಪತಿ ಹುದ್ದೆಗೆ ಕೇಳಿಬಂದಿದ್ದವು. ಬಳಿಕ ಶಿವಸೇನೆ ಮೋಹನ್ ಭಾಗವತ್ ಅವರ ಹೆಸರನ್ನು ಪ್ರಸ್ತಾಪಿಸಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರವಧಿಯು ಜುಲೈ 24ರಂದು ಅಂತ್ಯಗೊಳ್ಳಲಿದೆ.