ನವದೆಹಲಿ: ದೇಶದ 16ನೇ ರಾಷ್ಟ್ರಪತಿ ಆಯ್ಕೆಗಾಗಿ ಜುಲೈ 18 ರಂದು ಮತದಾನ ನಡೆಯಲಿದೆ. ಜುಲೈ 21 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನು ಘೋಷಿಸಿದರು. ಜುಲೈ 24 ರಂದು ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವಧಿ ಮುಕ್ತಾಯಗೊಳ್ಳಲಿದೆ. ಈ ಅವಧಿಯೊಳಗೆ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಎಂಟು ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆ 8 ಪಟ್ಟು ಬೆಳೆದಿದೆ: ಪ್ರಧಾನಿ
ಜೂನ್ 15 ರಂದು ರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಹೊರಡಿಸಲಿದ್ದು, ಜೂನ್ 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂನ್ 30 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜುಲೈ 02 ರೊಳಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅಂತಿಮವಾಗಿ ಜುಲೈ 18 ರಂದು ಮತದಾನ ನಡೆಯಲಿದ್ದು, ಜುಲೈ 21 ಎಣಿಕೆ ನಡೆಯಲಿದೆ. ಜುಲೈ 25 ರಂದು ಹೊಸ ರಾಷ್ಟ್ರಪತಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.
ರಾಷ್ಟ್ರಪತಿ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡುವಂತಿಲ್ಲ. ಸದಸ್ಯರು ತಮಗೆ ಬೇಕಾದ ಅಭ್ಯರ್ಥಿಗೆ ಮತ ಚಲಾಯಿಸಬಹುದು. ಯಾವುದೇ ಸದಸ್ಯ ದೇಶದ, ಯಾವುದೇ ಭಾಗದಿಂದ ಮತ ಚಲಾಯಿಸಬಹುದು. ನಿಗದಿತ ಪ್ರದೇಶ ಬಿಟ್ಟು ಮತ ಚಲಾಯಿಸುವುದಾದರೇ 10 ದಿನಗಳ ಮುಂಚೆ ಎಲ್ಲಿಂದ ಮತ ಚಲಾಯಿಸುತ್ತೇವೆ ಎಂದು ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: 3 ನಂಬರ್ನಿಂದ ನನಗೆ ಕಿರಿಕಿರಿ, ಧಮ್ಕಿ, ಬೆದರಿಕೆ ಕರೆಗಳು ಬರುತ್ತಿದೆ: ಮುತಾಲಿಕ್
ರಾಷ್ಟ್ರಪತಿ ಆಯ್ಕೆಗೆ ಲೋಕಸಭೆ, ರಾಜ್ಯಸಭೆ ಸಂಸದರು ಮತ್ತು ವಿಧಾನಸಭೆ ಸದಸ್ಯರು ಮತ ಚಲಾಯಿಸಲಿದ್ದಾರೆ. ದೇಶದಲ್ಲಿ ಒಟ್ಟು 4,809 ಸದಸ್ಯರು ಮತದಾನಕ್ಕೆ ಅರ್ಹವಾಗಿದ್ದು, 776 ಸಂಸದರು, 4,033 ಶಾಸಕರು ಒಳಗೊಂಡಿದ್ದಾರೆ.