ಕೊಪ್ಪಳ: ಪಂಚಮಸಾಲಿ ಸಮಾಜದ 4ನೇ ಪೀಠ ಸ್ಥಾಪನೆಗೆ ಕೊಪ್ಪಳದಲ್ಲಿ ಸದ್ದಿಲ್ಲದೆ ಸಿದ್ಧತೆ ನಡೆದಿದೆ. ಮೂರನೇ ಪೀಠ ಚರ್ಚೆ ಎನ್ನುತ್ತಿದ್ದಂತೆ ಇದೀಗ ನಾಲ್ಕನೇ ಪೀಠದ ಸರದಿ ಪ್ರಾರಂಭವಾಗಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಪಂಚಮಸಾಲಿಯ ನಾಲ್ಕನೇ ಪೀಠದ ಮೊದಲ ಸಭೆ ನೆಡಸಲು ಇದೀಗ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
ನಾಲ್ಕನೆ ಪೀಠ ವಿಶೇಷವಾಗಿ ಪಂಚಮಸಾಲಿ ಸಮಾಜದ ಮಹಿಳಾ ಪೀಠವಾಗಬೇಕು ಎನ್ನುವುದು ಸಮಾಜದ ಮಹಿಳೆಯರ ಕೂಗು ಕೇಳಿ ಬರುತ್ತಿದೆ. ಸುಮಾರು 40 ಲಕ್ಷ ಮಹಿಳೆಯರನ್ನು ಹೊಂದಿದ ಪಂಚಮಸಾಲಿ ಸಮಾಜಕ್ಕೆ ಪ್ರತ್ಯೇಕ ಮಹಿಳಾ ಪೀಠ ಆಗಬೇಕು ಎಂದು ಪಂಚಮಸಾಲಿ ಮಹಾಸಭಾ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬುದನೂರ ಮಹಿಳಾ ಪೀಠದ ಸ್ಥಾಪನೆಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕ್ರೀಡಾ ತರಬೇತುದಾರನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ವಿದ್ಯಾರ್ಥಿಗಳಿಂದ ಪ್ರತಿಭಟನೆ
ಈ ಕುರಿತು ಮಾತನಾಡಿದ ಅವರು, ಹೆಸರಿಗೆ ಮಾತ್ರ ಕಿತ್ತೂರು ಚೆನ್ನಮ್ಮ ಅಂತಾರೆ. ಆದರೆ ಈಗಿರುವ ಎರಡೂ ಪೀಠದಿಂದ ಸಮಾಜದ ಮಹಿಳೆಯರ ಅಭಿವೃದ್ಧಿ ಆಗಿಲ್ಲ. ಸಮಾಜದ ಒಕ್ಕೂಟದಲ್ಲಿ 11 ಜನ ಮಹಿಳೆಯರಿದ್ದಾರೆ. ಅದರಲ್ಲಿ ಒಬ್ಬರನ್ನು ಮಹಿಳಾ ಪೀಠದ ಪೀಠಾಧಿತಿ ಮಾಡಲಾಗುವುದು. ಮಹಿಳಾ ಪೀಠದ ಸ್ಥಾಪನೆ ಬಗ್ಗೆ ಈಗಾಗಲೇ ಒಂದು ಸಭೆ ಮಾಡಲಾಗಿದೆ ಎಂದು ವಿವರಿಸಿದರು.
ಮಹಿಳಾ ಪೀಠದ ಕುರಿತು ಕೂಡಲಸಂಗಮ, ಹರಿಹರ ಪೀಠದ ಸ್ವಾಮೀಜಿಗಳ ಗಮನಕ್ಕೆ ತರಲಾಗಿದೆ. ಸಮಾಜದ ಮೂರು ಪೀಠಗಳು ಮಹಿಳಾ ಪೀಠದ ಸ್ಥಾಪನೆಗೆ ಒಪ್ಪಿಗೆ ಸೂಚಿಸುತ್ತಾರೆ. ಯಾವುದೇ ಕಾರಣಕ್ಕೂ ಮಹಿಳಾ ಪೀಠ ಸ್ಥಾಪನೆ ವಿಷಯ ಕೈ ಬಿಡುವುದಿಲ್ಲ. ಮಹಿಳಾ ಪೀಠ ಸ್ಥಾಪನೆ ಮಾಡಿಯೇ ಮಾಡುತ್ತೇವೆ ಎಂದು ಕಿಶೋರಿ ಬುದನೂರ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕೃತ ಸಭೆ ಅಲ್ಲ ಎಂದಿದ್ದ ಬಾಲಚಂದ್ರ ಜಾರಕಿಹೊಳಿಗೆ ಕತ್ತಿ ಟಾಂಗ್