ಮಡಿಕೇರಿ: ನಾನು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದು, ರಾಜಕೀಯ ವಿಚಾರಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಮಾತನಾಡಿದರೆ ದಿನವಿಡಿ ಅದನ್ನೇ ಹೈಲೈಟ್ ಮಾಡುತ್ತಾರೆ. ಒಳ್ಳೆಯ ಕೆಲಸಗಳು ಈ ವೇಳೆ ಗಣನೆಗೆ ಬರುವುದಿಲ್ಲ. ಅದ್ದರಿಂದ ರಾಜಕೀಯದ ಬಗ್ಗೆ ಸದ್ಯಕ್ಕೆ ಮಾತನಾಡಲ್ಲ. ನಾನು ಅಭಿವೃದ್ಧಿಯ ಬಗ್ಗೆ ಗಮನ ಹರಿಸಿದ್ದೇನೆ ಎಂದರು.
ಇದೇ ವೇಳೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳಲು ಈಶ್ವರಪ್ಪ ನಿರಾಕರಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಈಶ್ವರಪ್ಪ ಅವರಿಗೆ ಮೈಸೂರು ದೂರವಾಗುತ್ತದೆ. ಉಸ್ತುವಾರಿ ವಹಿಸಿಕೊಂಡರೆ ಸಾಕಷ್ಟು ಬಾರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಇದರಿಂದ ಅವರಿಗೆ ಕ್ಷೇತ್ರಕ್ಕೆ ಬಂದು ಹೋಗುವುದು ಕಷ್ಟ ಆಗುತ್ತೆ. ಹೀಗಾಗಿ ನಿರಾಕರಿಸಿದ್ದಾರೆ ಅಷ್ಟೇ ಅದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ ಎಂದರು. ಇದನ್ನು ಓದಿ : ಲೋಕಸಭೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲಲು ಉಸ್ತುವಾರಿಗಳನ್ನು ನೇಮಿಸಿದ್ದೇವೆ: ಈಶ್ವರಪ್ಪ
ಮೈಸೂರು-ಮಂಗಳೂರು ಹೆದ್ದಾರಿ ವಿಸ್ತರಣೆಗೆ ಬದ್ಧ ಎಂದು ಪುನರ್ ಉಚ್ಚರಿಸಿದ ಸಂಸದ ಪ್ರತಾಪ್ ಸಿಂಹ, ಚತುಷ್ಪತ ರಸ್ತೆ ನಿರ್ಮಾಣಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಹೆದ್ದಾರಿ ರಸ್ತೆ ವಿಸ್ತರಣೆಯಿಂದ ಕೊಡಗಿನ ಪರಿಸರಕ್ಕೆ ಕೇಂದ್ರದಿಂದ ಹಾನಿಯಾಗಲ್ಲ. ಒಳ್ಳೆ ಕೆಲಸ ಮಾಡುವಾಗ ವಿರೋಧ ವ್ಯಕ್ತವಾಗುವುದ ಸಹಜ. ಬೇಕೋ, ಬೇಡವೋ ಎಂಬುದನ್ನು ಅಂತಿಮವಾಗಿ ಜನ ತೀರ್ಮಾನಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv