ಹೈದರಾಬಾದ್: ಬಾಹುಬಲಿ ಚಿತ್ರ ಯಶಸ್ವಿಗೊಂಡ ನಂತರ ಪ್ರಭಾಸ್ ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಭಾರತದಲ್ಲಿ ಅಲ್ಲದೇ ವಿಶ್ವದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆದರೆ ಈ ಚಿತ್ರದ ಯಶಸ್ಸು ಖಂಡಿತವಾಗಿಯೂ ಅವರ ತಲೆಗೆ ಹೋಗಿಲ್ಲ.
ಟಾಲಿವುಡ್ ನಲ್ಲಿ ಪ್ರಭಾಸ್ ನಮ್ರತೆಯ ವ್ಯಕ್ತಿ ಎಂದು ಅವರ ಜೊತೆ ನಟಿಸಿದ್ದ ನಾಯಕಿಯರು ಈ ಹಿಂದೆ ಹೇಳಿದ್ದರು. ಈಗ ಸ್ವತ: ಅವರೇ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ತಮ್ಮ ಮತ್ತೊಂದು ಗುಣ, ಸ್ವಭಾವದ ಬಗ್ಗೆ ಹೇಳಿಕೊಂಡಿದ್ದಾರೆ.
ಪ್ರಭಾಸ್ ಮೂಲತಃ ಸಿನಿಮಾ ಕುಟುಂಬದಿಂದ ಬಂದವರಾಗಿದ್ದು, ತಂದೆ ಉಪಲಪತಿ ಸೂರ್ಯನಾರಾಯಣ ರಾಜು ಅವರು ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದರು. ಈಗ ಹೇಗೆ ನಿರ್ಮಾಪಕರಿಗೆ ಆರ್ಥಿಕ ಸಮಸ್ಯೆ ಕಾಡುತಿತ್ತೋ ಅದೇ ರೀತಿಯಾಗಿ ನನ್ನ ತಂದೆ ಕೂಡ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಪ್ರಭಾಸ್ ಹಳೆಯ ಜೀವನವನ್ನು ಮೆಲುಕು ಹಾಕಿದ್ದಾರೆ.
ಕಾಲೇಜಿನ ಅನುಭವನ್ನು ಹಂಚಿಕೊಂಡ ಅವರು, ನಮ್ಮದು ಸಿನಿ ಕುಟುಂಬವಾಗಿದ್ದರೂ ನಾನು ಕಾಲೇಜಿಗೆ ಬಸ್ಸಿನಲ್ಲಿ ಹೋಗುತ್ತಿದ್ದೆ. ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಜನರು ನನ್ನನ್ನು ನೋಡಿ ಇವನು ದೊಡ್ಡ ಕುಟುಂಬದ ಹುಡುಗ ಎಂದು ಹೇಳುತ್ತಿದ್ದರು. ಅವರ ಈ ಹೇಳಿಕೆ ನನಗೆ ಸ್ಪೂರ್ತಿಯಾಗಿ ಹೆಚ್ಚು ಶ್ರಮಿಸಲು ಸಾಧ್ಯವಾಯಿತು ಎಂದು ಪ್ರಭಾಸ್ ತಿಳಿಸಿದ್ದಾರೆ.
ಮೊದಲ ಚಿತ್ರ ‘ಈಶ್ವರ್’ ಬಗ್ಗೆ ಮಾತನಾಡಿದ ಪ್ರಭಾಸ್, ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ನನ್ನನ್ನು ನಾನು ನೋಡಿ ನನಗೆ ನಂಬಲು ಸಾಧ್ಯವಾಗಲಿಲ್ಲ. ನನ್ನ ತಾಯಿ ಹಾಗೂ ನನ್ನ ಸಹೋದರಿ ನನ್ನ ಪಕ್ಕದಲ್ಲೇ ಕುಳಿತಿದ್ದರು. ಚಿತ್ರ ವಿಕ್ಷೀಸುವಾಗ ಒಬ್ಬರ ಕೈಯನ್ನು ಒಬ್ಬರು ಹಿಡಿದು ಕುಳಿತ್ತಿದ್ದೆವು. ಆ ಚಿತ್ರ ಅಷ್ಟು ಯಶಸ್ಸು ಕಂಡಿಲ್ಲ. ಆ ಚಿತ್ರ ಒಳ್ಳೆಯ ಸಿನಿಮಾ ಆಗಿದೆಯೋ? ಇಲ್ಲವೋ ಎಂಬುದು ತಿಳಿದಿಲ್ಲ. ಆದರೆ ಅದು ತುಂಬಾನೇ ಭಾವನಾತ್ಮಕ ಸಿನಿಮಾವಾಗಿತ್ತು ಎಂದು ಪ್ರಭಾಸ್ ಮ್ಯಾಗಜಿನ್ ಒಂದಕ್ಕೆ ತಿಳಿಸಿದ್ದಾರೆ.
ಬಾಹುಬಲಿ ಚಿತ್ರ ಬಿಡುಗಡೆಗೊಂಡ ನಂತರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಅಭಿಮಾನಿಗಳನ್ನು ಸಂತೋಷಪಡಿಸುವುದು ಕಷ್ಟವಾಗುತ್ತಿದೆ. ಏಕೆಂದರೆ ಅವರದ್ದು ಬೆಲೆ ಕಟ್ಟಲಾಗದ ಪ್ರೀತಿ ಎಂದು ತಮ್ಮ ಅಭಿಮಾನಿಗಳ ಮೇಲಿರುವ ಪ್ರೀತಿಯನ್ನು ಪ್ರಭಾಸ್ ಹೇಳಿದರು.
ಪ್ರಸ್ತುತ ಟಾಲಿವುಡ್ ನಲ್ಲಿ ಟಾಪ್ ನಟರ ಪಟ್ಟಿಯಲ್ಲಿರುವ ಪ್ರಭಾಸ್ ಈಗಾಗಲೇ ನಿವೃತ್ತಿ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ನಟನೆಯಿಂದ ನಿವೃತ್ತರಾದ ಮೇಲೆ ಫಿಷಿಂಗ್ ಹೋಗಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ನಿವೃತ್ತ ಜೀವನದ ಕನಸು ನನಸು ಮಾಡಲು ಈಗಾಗಲೇ ಹೈದರಾಬಾದ್ ಹೊರವಲಯದಲ್ಲಿ ಆಸ್ತಿಯ ಮೇಲೆ ಬಂಡವಾಳ ಹೂಡಲಿದ್ದು, ತಮ್ಮ ಸ್ನೇಹಿತರ ಜೊತೆ ಆಕ್ವಾಕಲ್ಚರ್ ಕಲಿಯಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.