ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚೋಕ್ಕೆ ಹೈಕೋರ್ಟ್ ನೀಡಿದ ಸಮಯ ಇಂದು ಮುಗಿಯುತ್ತದೆ. ಹೈ ಕೋರ್ಟ್ ಚಾಟಿಯಿಂದ ಎಚ್ಚೆತ್ತಿರುವ ಬಿಬಿಎಂಪಿ ರಾತ್ರಿ ಹಗಲು, ಎನ್ನದೆ ರಸ್ತೆ ಗುಂಡಿಗಳನ್ನು ಮುಚ್ಚಲು ಹರಸಾಹಸ ಪಡುತ್ತಿದೆ. ಮೂರು ದಿನದಿಂದ 24*7 ಕೆಲಸ ಮಾಡುತ್ತಿದ್ದರೂ ಬೆಂಗಳೂರು ಮಾತ್ರ ಗುಂಡಿ ಮುಕ್ತವಾಗೋ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.
ಸೋಮವಾರದೊಳಗೆ ಬೆಂಗಳೂರನ್ನು ಗುಂಡಿಮುಕ್ತ ನಗರವನ್ನಾಗಿ ಘೋಷಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಆದೇಶಿಸಿದೆ. ಅದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ರಜೆ ದಿನಗಳಲ್ಲೂ ಪಾಥ್ವೋಲ್ಗಳನ್ನು ಹುಡುಕಿ ತಡಕಿ ಫಿಲ್ ಮಾಡುತ್ತಿದ್ದಾರೆ. ಹಾಗಿದ್ರೆ ಬೆಂಗಳೂರಿನ ಎಲ್ಲ ರಸ್ತೆಗಳು ಇಂದಿನಿಂದ ಗುಂಡಿಗಳು ಇಲ್ಲದೇ ನಳನಳಿಸುತ್ತಾ, ವಾಹನ ಸವಾರರ ಪರದಾಟಕ್ಕೆ ಬ್ರೇಕ್ ಬೀಳುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಬೆಂಗಳೂರಿನಲ್ಲಿ ಆರಂಭವಾಗುವ ವರುಣ ಆರ್ಭಟಕ್ಕೆ ಗೊರಗುಂಟೆಪಾಳ್ಯ ಬಳಿ ಗುಂಡಿಗಳು ನೀರಿನಿಂದ ತುಂಬಿ ತುಳುಕ್ಕುತ್ತಿವೆ. ವೆಸ್ಟ್ ಆಫ್ ಕಾರ್ಡ್ ರೋಡ್, ಹೆಣ್ಣೂರು ಕ್ರಾಸ್ ರಸ್ತೆಯಲ್ಲಂತು ಇಡೀ ರಸ್ತೆಯೇ ಗುಂಡಿ ಮಯವಾಗಿದೆ. ಇವೆಲ್ಲವನ್ನು ಮುಚ್ಚುಸಿ ಕೋರ್ಟ್ ಗೆ ಉತ್ತರಿಸಬೇಕಿರೋ ಮೇಯರ್ ಮಾಧ್ಯಮಗಳ ಮುಂದೆ ಹಾರಿಕೆಯ ಉತ್ತರ ಕೊಟ್ಟು ಜಾರಿಕೊಂಡಿದ್ದಾರೆ.
ಒಟ್ಟಿನಲ್ಲಿ ನಗರದಲ್ಲಿ ಲೆಕ್ಕವಿಲ್ಲದಷ್ಟು ಗುಂಡಿಗಳನ್ನು ಮುಚ್ಚಿಸೋಕೆ ಬಿಬಿಎಂಪಿ ತರಾತುರಿಯಲ್ಲಿ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಕೆಲಸ ಮೊದಲೇ ಮಾಡಿದ್ರೆ ಅಧಿಕಾರಿಗಳು ನಿದ್ದೆಗೆಟ್ಟು, ರಜಾ ದಿನಗಳಲ್ಲಿ ಪರದಾಡುವಂತ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಇವುಗಳ ನಡುವೆ ಕೋರ್ಟ್ ಗೆ ಇಂದು ಯಾವ ರೀತಿ ಬಿಬಿಎಂಪಿ ಉತ್ತರಿಸುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv