ರಾಯಚೂರು: ಶನಿವಾರದಂದು ಹಾಕಲಾಗಿದ್ದ ಡಾಂಬರ್ ರಸ್ತೆ ಕೇವಲ ಒಂದೇ ದಿನಕ್ಕೆ ಕಿತ್ತುಹೋಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೊಂಡೆಹಾಳ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಹಾಕಿದ ರಸ್ತೆ ಒಂದೇ ದಿನದಲ್ಲಿ ಕಿತ್ತುಹೋಗಿದೆ. ಈ ರೀತಿ ಕಳಪೆ ಕಾಮಗಾರಿಯಿಂದ ರಸ್ತೆ ಕಿತ್ತು ಬಂದಿರುವುದಕ್ಕೆ ತೊಂಡೆಹಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 48 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಬೇಕಾದ 1 ಕಿ.ಮೀ ಡಾಂಬರ್ ರಸ್ತೆಯನ್ನ ರಾತ್ರೋ ರಾತ್ರಿ ಮಾಡಿ ಮುಗಿಸಿದ್ದಾರೆ.
20 ವರ್ಷಗಳಿಂದ ರಸ್ತೆಯಿಲ್ಲದ ಗ್ರಾಮಕ್ಕೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಲ್ಲಿ 48 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ತೀರಾ ಕಳಪೆ ಮಟ್ಟದ ಡಾಂಬರೀಕರಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶನಿವಾರ ಹಾಕಿದ್ದ ರಸ್ತೆ ಇಂದು ಬೆಳಗ್ಗೆ ನೋಡಿದಾಗ ಎಲ್ಲವೂ ಕಿತ್ತು ಹೋಗಿತ್ತು. ಈ ರಸ್ತೆಯ ಮೇಲೆ ನಡೆದರೆ ಸಾಕು ಡಾಂಬರ್ ಕಿತ್ತು ಬರುತ್ತಿದೆ. ವರ್ಷಾನೂ ಗಟ್ಟಲೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಈ ಭಾಗದ ಜನರು ಒದ್ದಾಡುತ್ತಿದ್ದರು. ಈಗಲಾದರೂ ರಸ್ತೆ ವ್ಯವಸ್ಥೆ ಆಗುತ್ತಿದೆಯಲ್ಲ ಅಂತ ಖುಷಿ ಪಟ್ಟಿದ್ದರು. ಆದರೆ ತೀರ ಕೆಳಮಟ್ಟದ ಕಾಮಗಾರಿ ಮಾಡಿ ಬೇಜವಾಬ್ದಾರಿ ತೋರಿದಕ್ಕೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಅಲ್ಲದೆ ಕೂಡಲೇ ಪುನಃ ಕಾಮಗಾರಿ ನಡೆಸಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv