– 7 ಜಿಲ್ಲೆಗಳಲ್ಲಿ ಬಿರುಸಿನ ಮತದಾನ
ಬಳ್ಳಾರಿ: ಲೋಕಸಭಾ ಚುನಾವಣೆ ನಡೆದ ಫಲಿತಾಂಶವೂ ಹೊರಬಿದ್ದಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ಇದೀಗ ಸ್ಥಳೀಯ ಚುನಾವಣೆಯ ಅಬ್ಬರ ಜೋರಾಗಿದೆ. ಹೌದು. 7 ಜಿಲ್ಲೆಗಳಲ್ಲಿ ಬಿರುಸಿನ ಮತದಾನ ನಡೆಯಲಿದ್ದು, ಇದೀಗ ಅಭ್ಯರ್ಥಿಗಳು ತಮ್ಮನ್ನು ಗೆಲ್ಲಿಸಿಕೊಡಬೇಕೆಂದು ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ.
ಬಳ್ಳಾರಿಯ ಸಂಡೂರು ಪುರಸಭೆ ಚುನಾವಣೆಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದ್ದು, ಲೋಕಸಭೆ, ವಿಧಾನಸಭೆ ಚುನಾವಣೆಯಂತೆ ಇಲ್ಲೂ ಅಮಿಷ ಒಡ್ಡಲಾಗುತ್ತಿದೆ. ಅಭ್ಯರ್ಥಿಗಳು ತಮ್ಮ ಗೆಲುವುಗಾಗಿ ಭರ್ಜರಿ ಹಣ ಖರ್ಚು ಮಾಡುತ್ತಿದ್ದಾರೆ. ಮತದಾರರಿಗೆ ಬೆಳ್ಳಿ ನಾಣ್ಯಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ಪಕ್ಷೇತರ ಅಭ್ಯರ್ಥಿಗಳು ದೊಡ್ಡ ಪಕ್ಷಗಳಿಗೆ ಹೊಡೆತ ಕೊಡುತ್ತಿದ್ದಾರೆ.
7 ಜಿಲ್ಲೆಗಳಲ್ಲಿ ಮತದಾನ:
ಬೀದರ್, ಚಿತ್ರದುರ್ಗ, ಹಾವೇರಿ, ಕೋಲಾರ, ತುಮಕೂರು ಯಾದಗಿರಿ ಹಾಗೂ ಬಳ್ಳಾರಿಯಲ್ಲಿ ಚುನಾವಣೆ ನಡೆಯುತ್ತಿದೆ. ಬೀದರ್ ಜಿಲ್ಲೆಯಲ್ಲಿ ಒಟ್ಟು 128 ವಾಡ್9ಗಳಿಗೆ ಮತದಾನ ನಡೆಯುತ್ತಿದ್ದು, ಒಟ್ಟು 430 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿತ್ರದುರ್ಗದಲ್ಲಿ 31 ವಾರ್ಡ್ ಗಳಲ್ಲಿ ಚುನಾವಣೆ ನಡೆಯುತ್ತಿದೆ. ಇಲ್ಲಿ 122 ಜನ ಅಭ್ಯರ್ಥಿ ಗಳು ಕಣದಲ್ಲಿದ್ದಾರೆ. ಹಾವೇರಿಯಲ್ಲಿ ಬ್ಯಾಡಗಿ ಪುರಸಭೆಯ 23 ಮತ್ತು ಶಿಗ್ಗಾಂವಿ ಪುರಸಭೆಯ 23 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬ್ಯಾಡಗಿ ಪುರಸಭೆಯ 23 ವಾರ್ಡ್ ಗಳಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರರು ಸೇರಿ 79 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿಗ್ಗಾಂವಿ ಪುರಸಭೆಯ 23 ವಾರ್ಡುಗಳಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಸೇರಿ ಒಟ್ಟು 95 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕೋಲಾರದಲ್ಲಿ ಮಾಲೂರು, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ತಾಲೂಕಿನಲ್ಲಿ ಪುರಸಭೆ ಚುನಾವಣೆ ನಡೆಯುತ್ತಿದೆ. ಮಾಲೂರಿನಲ್ಲಿ ಒಟ್ಟು 27 ವಾರ್ಡ್ ಗಳಿಗೆ ಚುನಾವಣೆ, 79 ಜನ ಕಣದಲ್ಲಿದ್ದಾರೆ. ಬಂಗಾರಪೇಟೆಯಲ್ಲಿ ಒಟ್ಟು 27 ವಾರ್ಡ್ ಗಳಿಗೆ ಚುನಾವಣೆ, 80 ಜನ ಕಣದಲ್ಲಿದ್ದಾರೆ. ಶ್ರೀನಿವಾಸಪುರದಲ್ಲಿ ಒಟ್ಟು 23 ವಾರ್ಡ್ ಗಳಿಗೆ ಚುನಾವಣೆ, 87 ಜನ ಕಣದಲ್ಲಿದ್ದಾರೆ. ಕಳೆದ ಬಾರಿ ಮಾಲೂರಿನಲ್ಲಿ ಬಿಜೆಪಿ, ಬಂಗಾರಪೇಟೆಯಲ್ಲಿ ಕಾಂಗ್ರೆಸ್, ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.
ತುಮಕೂರು ಜಿಲ್ಲೆಯಲ್ಲಿ ಎರಡು ಪುರಸಭೆ, ಒಂದು ಪಟ್ಟಣ ಪಂಚಾಯತ್, ಒಂದು ನಗರ ಸಭೆಗೆ ಇಂದು ಮತದಾನ ನಡೆಯುತ್ತಿದೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರಸಭೆಗೆ ಇಂದು ಚುನಾವಣೆ ನಡೆಯುತ್ತಿದೆ. ನೂತನವಾಗಿ ಪುನರ್ ವಿಂಗಡಣೆಗೊಂಡಿರುವ ಒಟ್ಟು 31 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿಯ 31 ,ಕಾಂಗ್ರೆಸ್ ನ 29, ಜೆಡಿಎಸ್ ನ 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ.