ನವದೆಹಲಿ: ಎನ್ಸಿಪಿ ನಾಯಕ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಬಳಿಕ ತೀವ್ರ ಚರ್ಚೆಯಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾನೆ ಎನ್ನಲಾಗುತ್ತಿದೆ. ಬಾಬಾ ಸಿದ್ದಿಕಿ ಸ್ಪರ್ಧಿಸಿದ್ದ ಪಶ್ಚಿಮ ಬಾಂದ್ರಾದಿಂದಲೇ ಆತ ಕಣಕ್ಕಿಳಿಯಬಹುದು ಎಂದು ವರದಿಯಾಗಿದೆ.
ಚುನಾವಣಾ ಆಯೋಗದಲ್ಲಿ ನೋಂದಾಯಿತ ರಾಜಕೀಯ ಪಕ್ಷ ಉತ್ತರ ಭಾರತೀಯ ವಿಕಾಸ್ ಸೇನೆ, ಲಾರೆನ್ಸ್ ಬಿಷ್ಣೋಯ್ ಪರವಾಗಿ ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿಗಳಿಂದ ಎಬಿ ಫಾರ್ಮ್ ಕೇಳಿದೆ. ನಾಮನಿರ್ದೇಶನವನ್ನು ಸಲ್ಲಿಸಲು ಎಬಿ ಫಾರ್ಮ್ ಅತ್ಯಗತ್ಯ ಮತ್ತು ಔಪಚಾರಿಕ ದಾಖಲೆಯಾಗಿದೆ. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ | ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಟಿವಿಗೆ ಸಂದರ್ಶನ – 7 ಪೊಲೀಸರು ಸಸ್ಪೆಂಡ್
ಪಕ್ಷದ ನಾಯಕ ಸುನೀಲ್ ಶುಕ್ಲಾ ಈ ಬಗ್ಗೆ ಚುನಾವಣಾಧಿಕಾಗಳಿಗೆ ಪತ್ರ ಬರೆದಿದ್ದಾರೆ. ಆಯೋಗ ನೀಡುವ ಫಾರ್ಮ್ಗೆ ಲಾರೆನ್ಸ್ ಬಿಷ್ಣೋಯ್ ಸಹಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆತ ಒಪ್ಪಿಗೆ ನೀಡಿದರೆ, ಪಕ್ಷವು ಶೀಘ್ರದಲ್ಲೇ 50 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿಕೊಂಡಿದ್ದಾರೆ.
ಉತ್ತರ ಭಾರತದ ವಿಕಾಸ ಸೇನಾ ನಾಯಕ ಸುನಿಲ್ ಶುಕ್ಲಾ ಅವರು ಮೊದಲು ಖಾರ್ ಪೊಲೀಸ್ ಠಾಣೆಗೆ ತೆರಳಿದ್ದರು. ನಂತರ ಬಾಲ್ಕರನ್ ಬ್ರಾಡ್ ಹೆಸರಿನಲ್ಲಿ ನಾಮಪತ್ರಗಳನ್ನು ಸಂಗ್ರಹಿಸಲು ಚುನಾವಣಾಧಿಕಾರಿಯನ್ನು ಸಂಪರ್ಕಿಸಿದರು. ಲಾರೆನ್ಸ್ ಬಿಷ್ಣೋಯ್ ನಿಜವಾದ ಹೆಸರು ಬಾಲ್ಕರನ್ ಬ್ರಾಡ್ ಆಗಿದೆ. ಇದೇ ಕ್ಷೇತ್ರದಿಂದ ಬಾಬಾ ಸಿದ್ದಿಕಿ ಪುತ್ರ ಸಹ ಕಣಕ್ಕಿಳಿದಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್ನ ಸಬರಮತಿ ಜೈಲಿನಲ್ಲಿದ್ದಾನೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್ – ಪಾಕ್ ಡ್ರೋನ್ಗಳ ಮೂಲಕ ಗನ್ ಪೂರೈಕೆ?