ಯಾದಗಿರಿ: ಭತ್ತದ ಗದ್ದೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ ಎಂದು ನೋಡಲು ಹೋದ ಪೊಲೀಸರಿಗೆ ಆಶ್ಚರ್ಯದ ಸಂಗತಿಯೊಂದು ಎದುರಾದ ಘಟನೆ ಯಾದಗಿರಿ ನಗರದ ಹೊರ ಭಾಗದಲ್ಲಿ ನಡೆದಿದೆ.
ಎಂದಿನಂತೆ ಭತ್ತದ ಗದ್ದೆಯ ಮಾಲೀಕರು ಗದ್ದೆಗೆ ತೆರಳಿದಾಗ ಗದ್ದೆಯಲ್ಲಿ ಯಾರೋ ಕೊಲೆ ಮಾಡಿ ಶವವನ್ನು ಬಿಸಾಕಿದ್ದಾರೆ ಎಂಬ ಅನುಮಾನದಿಂದ ಯಾದಗಿರಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವ್ಯಕ್ತಿಯ ದೇಹವು ಸಂಪೂರ್ಣವಾಗಿ ಕೆಸರಿನಲ್ಲಿ ಸಿಲಕಿದೆ ಎಂದು ನೋಡಲು ಹೋದಾಗ ಆ ವ್ಯಕ್ತಿ ಎದ್ದು ಕುಳಿತಿದ್ದನ್ನು ನೋಡಿ ಅಲ್ಲಿದ್ದ ಪೊಲೀಸರು ದಂಗಾಗಿ ಹೋಗಿದ್ದಾರೆ.
ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ನಿವಾಸಿ ವೀರಭದ್ರಯ್ಯ ಶನಿವಾರ ಕಂಠಪೂರ್ತಿ ಕುಡಿದು ನಗರದ ಹೊರ ಭಾಗದಲ್ಲಿ ಭತ್ತದ ಗದ್ದೆಯ ಕೆಸರಿನಲ್ಲಿ ಸಿಲಕಿದ್ದಾರೆ. ಇಂದು ಮಧ್ಯಾಹ್ನ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಎದ್ದು ಕುಳಿತ ವೀರಭದ್ರಯ್ಯನಿಗೆ ನಗರ ಠಾಣೆ ಪಿಎಸೈ ಮಾಹಂತೇಶ ಸಜ್ಜನ್ ವಿಚಾರಿಸಿದಾಗ ಕುಡಿದ ಅಮಲಿನಲ್ಲಿ ಈ ಘಟನೆ ನಡೆದಿದೆ ಅಂತ ವೀರಭದ್ರಯ್ಯ ಹೇಳಿದ್ದಾರೆ.
ಸದ್ಯ ಅಸ್ವಸ್ಥವಾಗಿರುವ ವೀರಭದ್ರಯ್ಯನಿಗೆ ಚಿಕಿತ್ಸೆ ಕೊಡಿಸಿ ನಂತರ ಊರಿಗೆ ಕಳಿಸುವ ಕೆಲಸವನ್ನು ಪಿಎಸ್ ಮಾಹಂತೇಶ ಸಜ್ಜನ ಮಾಡಿದ್ದಾರೆ.